ವಿಜಯಪುರ: ‘ಕಂದಾಯ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವ 10,450 ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರೆಂದು ಪರಿಗಣಿಸಿ ಕಾಯಂಗೊಳಿಸಬೇಕು’ ಎಂದು ಆಗ್ರಹಿಸಿ ಗ್ರಾಮ ಸಹಾಯಕ ಜಿಲ್ಲಾ ಸಂಘದ ಪದಾಧಿಕಾರಿಗಳು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎನ್.ಸಿ.ಇನಾಮದಾರ ಮಾತನಾಡಿ, ‘ರಾಜ್ಯ ವ್ಯಾಪಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 10,450 ಗ್ರಾಮ ಸಹಾಯಕರು, ಕಳೆದ 50 ವರ್ಷಗಳಿಂದ ಪೀಳಿಗೆಯಿಂದ ಪೀಳಿಗೆಗೆ ಅಂದರೆ ಅಜ್ಜ ಸತ್ತರೆ ತಂದೆಗೆ, ತಂದೆ ಸತ್ತರೆ ಮಗನಿಗೆ ಹೀಗೆ ಎರಡು ತಲೆಮಾರಿನಿಂದ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತ ಬಂದಿರುತ್ತಾರೆ. ಗ್ರಾಮ ಸಹಾಯಕರು ಮರಣ ಹೊಂದಿದಾಗ ಸರ್ಕಾರವು ಯಾವುದೇ ಪರಿಹಾರ ನೀಡುತ್ತಿಲ್ಲ. ಅಂಥ ಸಂದರಭದಲ್ಲಿ ಅವರ ಕುಟುಂಬಗಳು ಬೀದಿ ಪಾಲಾಗಿವೆ. ನಮಗೆ ನ್ಯಾಯ ಕೊಡಿ’ ಎಂದು ಆಗ್ರಹಿಸಿದರು.
‘ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಕಚೇರಿ ಶುದ್ಧೀಕರಣ, ಗ್ರಾಮ ಪರಿಸರ ಶುದ್ಧೀಕರಣ, ಶಿಷ್ಟಾಚಾರಗಳ ನಿರ್ವಹಣೆ ಮಾಡುತ್ತ ಬಂದಿದ್ದೇವೆ. ಗ್ರಾಮ ಆಡಳಿತಾಧಿಕಾರಿಗಳ ಕೈ ಕೆಳಗೆ ಕಂದಾಯ ಇಲಾಖೆಯಲ್ಲಿ ವಹಿಸಿಕೊಟ್ಟ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದ್ದರೂ ಸರ್ಕಾರ ಈವರೆಗೆ ಗ್ರಾಮ ಸಹಾಯಕರಿಗೆ ‘ಡಿ’ ದರ್ಜೆ ನೌಕರರೆಂದು ಪರಿಗಣಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅಂಗನವಾಡಿ, ಆಶಾ ಕಾರ್ಯಕರ್ತೆ ಆರೋಗ್ಯ ಇಲಾಖೆ, ಗ್ರಂಥಪಾಲಕರು, ಪೌರಕಾರ್ಮಿಕರು, ಪಂಚಾಯ್ತಿ ನೌಕರರು ಈ ಎಲ್ಲ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನ, ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಆದರೆ ಗ್ರಾಮ ಸಹಾಯಕರಿಗೆ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ’ ಎಂದರು.
ಉಪಾಧ್ಯಕ್ಷ ಅಲ್ಲಾಭಕ್ಷ ಕೊರಬು, ಕಾರ್ಯದರ್ಶಿ ಹಣಮಂತ ಉಪ್ಪಾರ, ವಿ.ಡಿ.ಕೊರಬು, ಎಸ್.ಎಸ್. ವಾಲಿಕಾರ, ಎಚ್.ಎಸ್.ಕಡಕೋಳ, ಜಿ.ಎಸ್.ಕುಮಚಗಿ, ಜಿ.ಬಿ.ವಾಲಿಕಾರ, ಎಂ.ಆರ್.ನಯ್ಕೋಡಿ, ಪೂಜಾರಿ, ಜಿ.ಎಸ್. ಕಟ್ಟಿಮನಿ, ಬಿ.ಬಿ.ಹುಕ್ಕೇರಿ, ಎಂ.ಡಿ.ಜಮದಾರ ಎಸ್.ಎಂ.ವಾಲಿಕಾರ ಜಿ.ವಾಯ್.ವಾಲಿಕಾರ ಇದ್ದರು.
ಗ್ರಾಮ ಸಹಾಯಕರ ಕುರಿತು ಮಲತಾಯಿ ಧೋರಣೆ ರಾಜ್ಯದಲ್ಲಿರುವ ಗ್ರಾಮ ಸಹಾಯಕರ ಸಂಖ್ಯೆ 10,450
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.