ವಿಜಯಪುರ: ನಗರ ಸೇರಿದಂತೆ ಸಿಂದಗಿ, ತಾಳಿಕೋಟೆ, ಮುದ್ದೇಬಿಹಾಳ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ಇಂಡಿ, ತಿಕೋಟಾ, ಬಬಲೇಶ್ವರ, ಆಲಮಟ್ಟಿ, ನಿಡಗುಂದಿ, ನಾಲತವಾಡ, ಹೊರ್ತಿ, ಚಡಚಣ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಂಜೆಯಿಂದ ಗುಡುಗು, ಸಿಡಿಲು ಸಹಿತ ನಿರಂತರ ಮಳೆ ಸುರಿಯತೊಡಗಿದೆ.
ಭಾನುವಾರ ತಡರಾತ್ರಿ ಕೆಲವೆಡೆ ರಭಸವಾಗಿ ಮಳೆ ಸುರಿದಿದೆ.
ಸದ್ಯ ಜಿಲ್ಲೆಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣ ಇದ್ದು, ಎಲ್ಲೆಡೆ ಜಿಟಿಜಿಟಿ ಮಳೆ ಮುಂದುವರಿದಿದೆ.
ಚರಂಡಿ, ಹಳ್ಳ,ಕೊಳ್ಳಗಳಲ್ಲಿ ನೀರು ಹರಿಯತೊಡಗಿದೆ. ಮುಂಗಾರು ಕೃಷಿ ಚಟುವಟಿಕೆಗೆ ಹದವಾದ ಮಳೆಯಾಗಿದೆ. ಗಾಳಿ- ಮಳೆಯ ಪರಿಣಾಮ ರಾತ್ರಿ ವಿದ್ಯುತ್ ವ್ಯತ್ಯಯವಾಯಿತು.
ಮುದ್ದೇಬಿಹಾಳ ತಾಲ್ಲೂಕಿನ ಚೊಂಡಿ ಗ್ರಾಮದಲ್ಲಿ ಮಳೆಗೆ ಯಂಕವ್ವ ಪಾಟೀಲ್ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದು, ಹಾನಿಯಾಗಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಉಷ್ಣಾಂಶ ಅಧಿಕವಾಗಿತ್ತು. ಇದೀಗ ಮಳೆಯಾಗುತ್ತಿರುವುದರಿಂದ ವಾತಾವರಣ ತಂಪಾಗಿದ್ದು, ಮಲೆನಾಡಿನಂತೆ ಕಂಡುಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.