ADVERTISEMENT

ಚುನಾವಣೆ: ಕಾಂಗ್ರೆಸ್‌ಗೆ ಸಿಪಿಎಂ ಬೆಂಬಲ ಘೋಷಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 16:00 IST
Last Updated 24 ಮಾರ್ಚ್ 2024, 16:00 IST
<div class="paragraphs"><p> ಸಿಪಿಎಂ</p></div>

ಸಿಪಿಎಂ

   

ವಿಜಯಪುರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು  ಭಾನುವಾರ ಇಲ್ಲಿ ನಡೆದ ಸಿಪಿಐ (ಎಂ) ಜಿಲ್ಲಾ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ನಗರದ ಎಪಿಎಂಸಿ ಆವರಣದಲ್ಲಿರುವ ಪ್ರಾಂತ ರೈತ ಸಂಘದ ಕಾರ್ಯಾಲಯದಲ್ಲಿ ನಡೆದ ಸಿಪಿಐ (ಎಂ) ಜಿಲ್ಲಾ ಸಮಿತಿ ಸಭೆಯಲ್ಲಿ, ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಬೆಂಬಲ ವ್ಯಕ್ತಪಡಿಸಲಾಯಿತು.

ADVERTISEMENT

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಾಗರಾಜ್ ಪಾಲಾಕ್ಷಯ್ಯ, ಕರ್ನಾಟಕವು ಈ ಬಾರಿ ಮಳೆ ಬಾರದೆ ಭೀಕರ ಬರಗಾಲಕ್ಕೆ ತುತ್ತಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಡಿಗಾಸು ನೀಡದೆ ಸತಾಯಿಸುತ್ತಿದೆ ಎಂದು ಹೇಳಿದರು. 

ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆರಿಸಿ ಹೋಗಿದ್ದರೂ ಬರಗಾಲ ಪರಿಹಾರ ನಿಧಿಗಾಗಿ ಧ್ವನಿ ಎತ್ತದಿರುವುದು ವಿಷಾದನೀಯ ಎಂದರು.

ಕಾರ್ಪೊರೇಟ್ ಕಂಪನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲು ಇವರಲ್ಲಿ ಹಣವಿದೆ ಆದರೆ, ಬರಗಾಲಕ್ಕೆ ಸಿಕ್ಕು ಒದ್ದಾಡುತ್ತಿರುವ ರೈತರ ಗೋಳು ಇವರ ಕಣ್ಣಿಗೆ ಕಾಣುತ್ತಿಲ್ಲ ಎಂದು ಅವರು ಟೀಕಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ, ಕೇಂದ್ರದಲ್ಲಿ
ಕೋಮುವಾದಿಗಳು ಮತ್ತು ಕಾರ್ಪೊರೇಟ್ ಕಂಪನಿಗಳು ಒಂದಾಗಿ ದೇಶದ ಅಮೂಲ್ಯ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಚುನಾವಣಾ ಬಾಂಡ್‌ಗಳ ಮುಖಾಂತರ ಭ್ರಷ್ಟಾಚಾರವನ್ನು ಕಾನೂನುಬದ್ದಗೊಳಿಸಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗುತ್ತಿದೆ ಇದನ್ನು ಮರೆಮಾಚಲು ದೇಶದಾದ್ಯಂತ ಕೋಮು ವಿಭಜಕ ನೀತಿಗಳನ್ನ ಹರಿಬಿಡಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿಯನ್ನು ಸೊಲಿಸುವುದು ಅವಶ್ಯವಿದೆ ಎಂದು ಹೇಳಿದರು.

ಸುರೇಖಾ ರಜಪೂತ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡರಾದ ಭೀಮಶಿ ಕಲಾದಗಿ, ನಿಂಗಪ್ಪ ಪೂಜಾರ, ಪಿಂಟು, ಸುನಂದಾ, ಅನುಸೂಯಾ ಹಜೇರಿ, ಪುಂಡಲೀಕ ಹಂದಿಗನೂರ, ಕಾಜೆಸಾಬ ಕೊಲಾರ, ರಮೇಶ್ ಟಿ.ಎಸ್., ಲಕ್ಷ್ಮಣ ಹಂದ್ರಾಳ ಇದ್ದರು.

ಶ್ರದ್ಧಾಂಜಲಿ: ಇತ್ತೀಚೆಗೆ ನಿಧನರಾದ ಪಕ್ಷದ ಸದಸ್ಯ ಸಿಂದಗಿಯ ಇಬ್ರಾಹಿಮಸಾಬ ನಾಗಠಾಣ, ತಳೆವಾಡದ ದ್ಯಾಮಣ್ಣ ಕೋಲಕಾರ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.