ದೇವರಹಿಪ್ಪರಗಿ: ವಾಹನಗಳು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡತಡೆಯಾದ ಗೂಡಂಗಡಿ, ಬೀದಿಬದಿಯ ವ್ಯಾಪಾರಿ ತಳ್ಳುವ ಗಾಡಿಗಳು, ಅತಿಕ್ರಮಣಗೊಂಡ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಹಶೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಮೊಹರೆ ಹಣಮಂತ್ರಾಯ ವೃತ್ತ, ಬಸ್ ನಿಲ್ದಾಣ ಆವರಣ ಸೇರಿದಂತೆ ನಾಡಕಚೇರಿವರೆಗಿನ ರಸ್ತೆಯಲ್ಲಿನ ಗೂಡಂಗಡಿ, ಬೀದಿಬದಿಯ ತಳ್ಳುವ ವ್ಯಾಪಾರಿ ಗಾಡಿಗಳನ್ನು ತೆರವುಗೊಳಿಸಿ ಮಾತನಾಡಿದರು.
ಪಟ್ಟಣ ಪಂಚಾಯಿತಿಯಲ್ಲಿ ಕಳೆದ 3 ದಿನಗಳ ಹಿಂದೆ ಜರುಗಿದ ಸಾರ್ವಜನಿಕ ಸಭೆಯ ಮೂಲಕ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ವಿಸ್ತರಣೆಗೆ ನಿರ್ಧಾರ ಮಾಡಲಾಗಿದೆ. ಗುರುವಾರ ನಾಡಕಚೇರಿ, ಶುಕ್ರವಾರ ಅಂಬೇಡ್ಕರ್ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಮೇನ್ ಬಜಾರಗಳಲ್ಲಿ ಕಾರ್ಯಾಚರಣೆ ಕೈಗೊಂಡು ಅತಿಕ್ರಮಣಗೊಂಡ ಕಟ್ಟಡಗಳು ಸೇರಿದಂತೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾದ ಮಳಿಗೆಗಳನ್ನು ತೆರವುಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಮಾತನಾಡಿ, ವಿಶಾಲವಾದ ರಸ್ತೆಗಳಿಂದ ಅಪಘಾತಗಳು ನಿಯಂತ್ರಿಸಲ್ಪಡುತ್ತವೆ. ಪಟ್ಟಣವು ಸುಂದರವಾಗಿ ಕಾಣುತ್ತದೆ. ಆದ್ದರಿಂದ ಈ ಕಾರ್ಯಾಚರಣೆಗೆ ಎಲ್ಲರೂ ಸಹಕರಿಸಬೇಕು ಎಂದರು.
ಪಿಎಸ್ಐ ಬಸವರಾಜ ತಿಪ್ಪಾರಡ್ಡಿ, ಹೆಸ್ಕಾಂ ಶಾಖಾಧಿಕಾರಿ ಯು.ಎಲ್.ಪಟ್ಟಣ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.