ವಿಜಯಪುರ: ನವೋದಯ ಕಾಲದ ಪ್ರಮುಖ ಸಾಹಿತಿಗಳಾಗಿ, ಜಾನಪದ ತಜ್ಞರಾಗಿ ರಾಜ್ಯದ ಗಮನ ಸೆಳೆದವರು ಡಾ.ಸಿಂಪಿ ಲಿಂಗಣ್ಣನವರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಡಾ. ಸಿಂಪಿ ಲಿಂಗಣ್ಣನವರ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಚಡಚಣ ಪಟ್ಟಣದಲ್ಲಿನ ಡಾ.ಸಿಂಪಿ ಲಿಂಗಣ್ಣ ನವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ‘ಸಿಂಪಿ ಲಿಂಗಣ್ಣನವರು ಸಂಗ್ರಹಿಸಿದ ಜನಪದ ಹಾಗೂ ಗರತಿಯ ಹಾಡುಗಳು ಸೇರಿದಂತೆ ನೂರಾರು ಕೃತಿಗಳನ್ನು ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿವೆ. ಅವರು ಮಧುರಚೆನ್ನರ ಒಡನಾಡಿಗಳು ಹಾಗೂ ಅರವಿಂದರ ಭಕ್ತರಾಗಿದ್ದರು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕೋಶಾಧ್ಯಕ್ಷ ಸಂಗಮೇಶ ಮೇತ್ರಿ ಮಾತನಾಡಿ, ‘ಡಾ.ಸಿಂಪಿ ಲಿಂಗಣ್ಣ ಜಾನಪದ ಸಂಶೋಧಕರಾಗಿ, ಕವಿಗಳಾಗಿ, ಪ್ರಬಂಧಕಾರ ಮತ್ತು ನಾಟಕಕಾರರಾಗಿ ರಾಜ್ಯಕ್ಕೆ ಪರಿಚಿತರಾಗಿದ್ದಾರೆ. ಕೊಪ್ಪಳದಲ್ಲಿ ಜರುಗಿದ 62ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ, ಗಡಿನಾಡಿನ ಜಾನಪದ ಭೀಷ್ಮರಾಗಿ, ಜಾನಪದ ಸಾಹಿತ್ಯಕ್ಕೆ ಒಂದು ಘನತೆ ತಂದು ಕೊಟ್ಟ ಮಹಾನ ಚೇತನ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಚಡಚಣ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಪ್ಪ ಮಾನೆ, ರಾಜೇಸಾಬ ಶಿವನಗುತ್ತಿ, ಸಾಹಿತಿ ವಿದ್ಯಾ ಕಲ್ಯಾಣಶೆಟ್ಟಿ, ಮುರ್ತುಜಾ ನಧಾಫ್, ಸಂತೋಷ ಕಲ್ಯಾಣಶೆಟ್ಟಿ, ನಿಂಗಪ್ಪ ಅಗಸರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.