ಸಿಂದಗಿ: ಗಬಸಾವಳಗಿ ಮತ್ತು ಬಿಸನಾಳ ಗ್ರಾಮಗಳನ್ನು ಆಲಮೇಲ ತಾಲ್ಲೂಕಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗಬಸಾವಳಗಿ ಗ್ರಾಮದಲ್ಲಿ ಹೋರಾಟ ಸಮಿತಿ ಪ್ರಮುಖರು ಆರಂಭಿಸಿದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಭಾನುವಾರವೂ ಮುಂದುವರಿದಿದೆ.
ಪತ್ರಕರ್ತ ಮಲ್ಲಿಕಾರ್ಜುನ ಹಿರೇಮಠ, ಶಿವಲಿಂಗಪ್ಪಗೌಡ ಬಿರಾದಾರ, ಅಶೋಕ ಬಿರಾದಾರ, ಸುರೇಶಬಾಬು ಕೋಟಿಖಾನಿ ಮಾತನಾಡಿದರು.
‘ಆಲಮೇಲ ತಾಲ್ಲೂಕಿಗೆ ಸೇರ್ಪಡೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಸಿಂದಗಿ ತಾಲ್ಲೂಕು ಕೇಂದ್ರ ಕೇವಲ 12 ಕಿ.ಮೀ ಹತ್ತಿರದಲ್ಲಿದೆ. ಆದರೆ ಆಲಮೇಲ 40 ಕಿ.ಮೀ ದೂರದಲ್ಲಿದೆ. ಈ ಕುರಿತು ಈಗಾಗಲೇ ಹೋರಾಟ ನಿರಂತರವಾಗಿ ಮುಂದುವರಿದಿದೆ. ಮೊದಲನೆ ಹಂತದಲ್ಲಿ ಗ್ರಾಮದಿಂದ ಸಿಂದಗಿಯವರೆಗೆ ಬೈಕ್ ರ್ಯಾಲಿ ಪ್ರತಿಭಟನೆಯಿಂದ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಸಿಂದಗಿ ತಾಲ್ಲೂಕಿನಲ್ಲಿಯೇ ಈ ಎರಡೂ ಗ್ರಾಮಗಳನ್ನು ಮರು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಎರಡನೆಯ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಸತ್ಯಾಗ್ರಹ ಕೂಡ ಮಾಡಲಾಗಿದೆ. ಈಗ ಮೂರನೆಯ ಹಂತದಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಮುಂದುವರಿಸಲಾಗಿದೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯ್ತಿಯಿಂದ ಠರಾವು ಕೂಡ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಭೀಮನಗೌಡ ಬಿರಾದಾರ, ನಾನಾಗೌಡ ಬಿರಾದಾರ, ಅಯ್ಯಪ್ಪಗೌಡ ಬಿರಾದಾರ, ಬಂಗಾರೆಪ್ಪಗೌಡ ಬಿರಾದಾರ, ಶಿವಶರಣ ಹೆಳವರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.