ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲಾಗುತ್ತಿದ್ದು ತಾಲ್ಲೂಕಿನಲ್ಲಿರುವ 30 ಇಲಾಖೆಗಳ ಪೈಕಿ 29 ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇನ್ನೊಂದು ಸ್ಥಾನಕ್ಕೆ ಮತದಾನ ನಡೆಸಲು ಚುನಾವಣಾಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ಈಗಾಗಲೇ 29 ಪದಾಧಿಕಾರಿಗಳ ಆಯ್ಕೆಯನ್ನು ಅವಿರೋಧವಾಗಿ ಮಾಡಲಾಗಿದ್ದು ನೌಕರರ ಸಂಘದ ಪದಾಧಿಕಾರಿಯಾಗಲು ಶಿಕ್ಷಣ ಇಲಾಖೆಯಲ್ಲಿ ತುರುಸಿನ ಪೈಪೋಟಿ ಕಂಡು ಬಂದಿದೆ.
ಮಾಹಿತಿಯ ಪ್ರಕಾರ ಮತಕ್ಷೇತ್ರ ಸಂಖ್ಯೆ 6ರ ತಾಳಿಕೋಟಿ ಭಾಗದಲ್ಲಿ ಬಂದಗಿ ಪಟೇಲ್ ಗಣಿಯಾರ ಹಾಗೂ ಶಂಕರಗೌಡ ಬಸನಗೌಡ ಬಿರಾದಾರ ಶಿಕ್ಷಣ ಇಲಾಖೆಯಿಂದ ಕಣದಲ್ಲಿ ಉಳಿದಿದ್ದಾರೆ. ಅ. 28ರಂದು ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಎಸ್.ಆರ್. ಕಟ್ಟೀಮನಿ ಮಾಹಿತಿ ನೀಡಿದ್ದಾರೆ.
ಆದರೆ ಅವಿರೋಧವಾಗಿ ಆಯ್ಕೆಯಾದವರು ಯಾರು ಎಂಬ ಮಾಹಿತಿ ನೀಡಲು ಈವರೆಗೂ ಚುನಾವಣಾಧಿಕಾರಿಗೆ ಸಾಧ್ಯವಾಗಿಲ್ಲ. ಎಲ್ಲ ಪದಾಧಿಕಾರಿಗಳ ಪಟ್ಟಿಯನ್ನು ಒಮ್ಮೆಲೇ ನೀಡುವುದಾಗಿ ಹೇಳುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.
‘ಅ. 21 ರಂದೇ ಅಂತಿಮವಾಗಿ ಕಣದಲ್ಲಿ ಉಳಿದವರ ಪಟ್ಟಿ ಹಾಗೂ ಅವಿರೋಧವಾಗಿ ಆಯ್ಕೆಯಾದವರ ಪಟ್ಟಿ ಪ್ರಕಟಿಸಬೇಕಿತ್ತು. ಚುನಾವಣಾಧಿಕಾರಿ ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ. ತಾಲ್ಲೂಕಿನ ನೌಕರರಿಗೆ ಚುನಾವಣೆಯ ಕುರಿತು ಸರಿಯಾದ ಮಾಹಿತಿಯನ್ನೇ ನೀಡಿಲ್ಲ’ ಎಂದು ಬಂದಗಿ ಪಟೇಲ್ ಗಣಿಯಾರ ಅಸಮಾಧಾನ ವ್ಯಕ್ತಪಡಿಸಿದರು.
400ಕ್ಕೂ ಹೆಚ್ಚು ಮತದಾರರು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಗೆ ಕಳೆದ ಮೂರು ಅವಧಿಗೆ ಅವಿರೋಧ ಆಯ್ಕೆಯನ್ನು ಮಾಡುತ್ತ ಬರಲಾಗಿತ್ತು. ಈ ಬಾರಿ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅ.28 ರಂದು ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಮುದ್ದೇಬಿಹಾಳ ಬಸವೇಶ್ವರ ವೃತ್ತದ ಹತ್ತಿರ ಇರುವ ಸರ್ಕಾರಿ ನೌಕರರ ಭವನದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. 400ಕ್ಕೂ ಹೆಚ್ಚು ಮತದಾರರು ಇದ್ದಾರೆ. ಕೆಲವರು ಅವಿರೋಧ ಆಯ್ಕೆಗೆ ಸಹಮತ ತೋರದ ಕಾರಣ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. –ಎಸ್.ಆರ್. ಕಟ್ಟಿಮನಿ ಚುನಾವಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.