ADVERTISEMENT

ಮುದ್ದೇಬಿಹಾಳ | ಭಾರಿ ಬಿರುಗಾಳಿ, ಮಳೆ: ಹಲವೆಡೆ ಮರಗಳು ಧರೆಗೆ

​ಪ್ರಜಾವಾಣಿ ವಾರ್ತೆ
Published 23 ಮೇ 2024, 15:55 IST
Last Updated 23 ಮೇ 2024, 15:55 IST
ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಹುಲಗಬಾಳದಲ್ಲಿ ಗುರುವಾರ ಮದ್ಯಾಹ್ನ ಶೆಡ್‌ನಲ್ಲಿ ಕಟ್ಟಿದ್ದ ಎತ್ತಿಗೆ ಸಿಡಿಲು ಬಡಿದು ಮೃತಪಟ್ಟಿದೆ
ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಹುಲಗಬಾಳದಲ್ಲಿ ಗುರುವಾರ ಮದ್ಯಾಹ್ನ ಶೆಡ್‌ನಲ್ಲಿ ಕಟ್ಟಿದ್ದ ಎತ್ತಿಗೆ ಸಿಡಿಲು ಬಡಿದು ಮೃತಪಟ್ಟಿದೆ   

ಮುದ್ದೇಬಿಹಾಳ : ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಬೀಸಿದ ಬಿರುಗಾಳಿ ಹಾಗೂ ಮಳೆಗೆ ಹಲವು ಮರಗಳು ಧರೆಗೆ ಉರುಳಿವೆ. ಸಿಡಿಲು ಬಡಿದು ಎತ್ತು ಮೃತಪಟ್ಟಿದೆ.

ತಾಲ್ಲೂಕಿನ ಅಡವಿ ಹುಲಗಬಾಳದಲ್ಲಿ ರೈತ ಹಣಮಂತ ಕಂಬಾರ ಎಂಬುವರು ಹೊಲದಲ್ಲಿಯ ಶೆಡ್‌ನಲ್ಲಿ ಕಟ್ಟಿದ್ದ ಎತ್ತು ಸಿಡಿಲು ಬಡಿದು ಮೃತಪಟ್ಟಿದೆ. ಇದು ₹ 50 ಸಾವಿರ ಮೌಲ್ಯದ ಎತ್ತಾಗಿದ್ದು, ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ನೊಂದ ರೈತ ತಾಲ್ಲೂಕಾಡಳಿತಕ್ಕೆ ಮನವಿ ಮಾಡಿದ್ದಾರೆ.

ಭಾರಿ ಬಿರುಗಾಳಿ ಬೀಸಿದ ಪರಿಣಾಮವಾಗಿ ತಾಲ್ಲೂಕಿನ ಹಂಡರಗಲ್ ರಸ್ತೆಯಲ್ಲಿ ಮೂರು ಮರಗಳು ರಸ್ತೆಗೆ ಉರುಳಿ ಬಿದ್ದಿವು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಗೂಡ್ಸ್ ವಾಹನವೊಂದರ ಗ್ಲಾಸ್ ಜಖಂಗೊಂಡಿದೆ. ಇದರಿಂದಾಗಿ ಮುದ್ದೇಬಿಹಾಳದಿಂದ ಯರಝರಿ, ಹಂಡರಗಲ್ ಕಡೆಗೆ ಹೋಗುವ ವಾಹನಗಳ ಸಂಚಾರ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಇದೇ ಮಾರ್ಗದಲ್ಲಿ ಮುದ್ದೇಬಿಹಾಳದ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನದ ಮೇಲೆ ಮರ ಉರುಳಿ ಬಿದ್ದಿದ್ದು ಅದರಲ್ಲಿದ್ದ ಚಾಲಕ, ಪ್ರಯಾಣಿಕರು ತಕ್ಷಣ ವಾಹನದಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ಧಾವಿಸಿ ಜೀವ ಉಳಿಸಿಕೊಂಡಿದ್ದಾರೆ.

ADVERTISEMENT

ಮರಗಳು ಬಿದ್ದಿರುವ ಘಟನೆ ತಿಳಿದ ತಕ್ಷಣ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿಯಿಂದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಕವಡಿಮಟ್ಟಿ, ಮುದ್ದೇಬಿಹಾಳದಲ್ಲಿ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಮುದ್ದೇಬಿಹಾಳ ಪಟ್ಟಣದ ಅಂಜುಮನ್ ಪ್ರೌಢಶಾಲೆಯ ಆವರಣದಲ್ಲಿದ್ದ ತಗಡಿನ ಶೆಡ್‌ವೊಂದು ಬಿರುಗಾಳಿಗೆ ಹಾರಿ ಬಂದು ವಿಜಯಪುರ ರಸ್ತೆಯಲ್ಲಿ ಬಿದ್ದಿತ್ತು. ಇದಲ್ಲದೇ ದಾನೇಶ್ವರಿ ಪೆಟ್ರೋಲ್ ಬಂಕ್ ಪಕ್ಕದಲ್ಲಿದ್ದ ನೀಲಗಿರಿ ಗಿಡದ ಟೊಂಗೆಗಳು ಮುರಿದು ಗೂಡಂಗಡಿ ಮೇಲೆ ಬಿದ್ದಿವೆ.

ಪ್ರವಾಸಿ ಮಂದಿರದಲ್ಲಿ ನಿಲುಗಡೆ ಮಾಡಿದ್ದ ಕಾರೊಂದಕ್ಕೆ ನೀಲಗಿರಿ ಗಿಡದ ಟೊಂಗೆ ಬಿದ್ದು ಬಾಗಿಲಿನ ಗ್ಲಾಸ್ ಒಡೆದಿದೆ. ಬನಶಂಕರಿ ದೇವಸ್ಥಾನದ ಸಮೀಪದಲ್ಲಿರುವ ಕಸ್ತೂರಿ ಗಡೇದ ಅವರ ಮನೆಯ ಮೇಲೆ ಮರವೊಂದು ಉರುಳಿ ಬಿದ್ದು ಹಾನಿ ಆಗಿದೆ. ಹುಡ್ಕೋ ಗೇಟ್ ಮುಂದೆ ಮರದ ಟೊಂಗೆ ಬಿದ್ದು ರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಮುದ್ದೇಬಿಹಾಳದಲ್ಲಿ ಬೀಸಿದ ಭಾರಿ ಬಿರುಗಾಳಿ, ಮಳೆಗೆ ಕೆಲವು ತಾಸುಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕೆಲವೆಡೆ ದೂರವಾಣಿ ಕೇಬಲ್, ಟಿವಿ ಕೇಬಲ್ ವೈರ್‌ಗಳು ಹರಿದು ಬಿದ್ದಿರುವುದು ಕಂಡು ಬಂದಿತು. ಮುದ್ದೇಬಿಹಾಳದಲ್ಲಿ ಮದ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಚರಂಡಿಗಳೆಲ್ಲ ತುಂಬಿ ಹರಿದು ರಸ್ತೆಯ ಮೇಲೆಲ್ಲ ಕೊಳಚೆ ಹರಿಯಿತು. ಸಂತೆಯ ದಿನವಾದ್ದರಿಂದ ಗ್ರಾಮೀಣ ಪ್ರದೇಶದಿಂದ ಬಂದವರು ಓಡಾಡಲು ಪರದಾಡಬೇಕಾಯಿತು.

ಕೆಲವೆಡೆ ಪುರಸಭೆ ಸಿಬ್ಬಂದಿ ಬ್ಲಾಕ್ ಆಗಿದ್ದ ಚರಂಡಿಗಳನ್ನು ಸ್ವಚ್ಛತೆ ಮಾಡಿದ್ದು ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಯಿತು. ಮುದ್ದೇಬಿಹಾಳದ ಬನಶಂಕರಿ, ಬಸವೇಶ್ವರ ವೃತ್ತದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳು ಗಾಳಿಯ ಹೊಡೆತಕ್ಕೆ ಇದ್ದಲ್ಲಿಯೇ ಉರುಳಿ ಬಿದ್ದವು. ತಹಶೀಲ್ದಾರ್ ಕಚೇರಿ ಬಳಿ ಇದ್ದ ನಂದಿನಿ ಮಿಲ್ಕ್‌ ಪಾರ್ಲರ್‌ನ  ಕುಡಿಯುವ ನೀರಿನ ಟ್ಯಾಂಕ್ ಗಾಳಿಗೆ ಹಾರಿ ಕೋರ್ಟ್‌ನ ಮುಖ್ಯದ್ವಾರದವರೆಗೆ ಹೋಗಿತ್ತು.

ಮುದ್ದೇಬಿಹಾಳ ತಾಲ್ಲೂಕಿನ ಹಂಡರಗಲ್ ರಸ್ತೆಯಲ್ಲಿ ಮೂರು ಮರಗಳು ರಸ್ತೆಗೆ ಉರುಳಿ ಬಿದ್ದವು
ಮುದ್ದೇಬಿಹಾಳ ಪಟ್ಟಣದಲ್ಲಿ ಗುರುವಾರ ಭಾರಿ ಬಿರುಗಾಳಿಗೆ ಅಂಜುಮನ್ ಪ್ರೌಢಶಾಲೆಯ ಆವರಣದಲ್ಲಿದ್ದ ಶೆಡ್ ಭಾರಿ ಬಿರುಗಾಳಿಗೆ ಹಾರಿ ಬಂದು ವಿಜಯಪುರ ರಸ್ತೆಯಲ್ಲಿ ಬಿದ್ದಿತು
ಮುದ್ದೇಬಿಹಾಳದ ಬನಶಂಕರಿ ದೇವಸ್ಥಾನದ ಸಮೀಪದಲ್ಲಿರುವ ಕಸ್ತೂರಿ ಗಡೇದ ಅವರ ಮನೆಯ ಮೇಲೆ ಮರವೊಂದು ಉರುಳಿ ಬಿದ್ದಿರುವುದು
ಮುದ್ದೇಬಿಹಾಳ ಪಟ್ಟಣದ ಮುಖ್ಯರಸ್ತೆಯ ಬಜಾರ್ ಹನುಮಾನ ದೇವಸ್ಥಾನದ ಸಮೀಪದಲ್ಲಿ ಗುರುವಾರ ಭಾರಿ ಮಳೆ ಸುರಿದ ಕಾರಣ ಚರಂಡಿಯ ನೀರು ರಸ್ತೆಯ ಮೇಲೆ ಹರಿದ ಪರಿಣಾಮವಾಗಿ ಸಂತೆಗೆಂದು ಬಂದ ಮಹಿಳೆಯರು ಕೊಳಚೆ ನೀರಲ್ಲೇ ಓಡಾಡಬೇಕಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.