ವಿಜಯಪುರ: ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದ್ದು, ಬಿರುಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನರನ್ನು ತಂಪಾಗಿಸಿತು. ಅರ್ಧಗಂಟೆಗೂ ಹೆಚ್ಚು ಸುರಿದ ಗಾಳಿ, ಗುಡುಗು, ಸಿಡಿಲು ಮಳೆಯಿಂದ ಒಣಗಿದ್ದ ಭೂಮಿ ಸ್ವಲ್ಪ ಮಟ್ಟಿಗೆ ಹಸಿಯಾಗಿದೆ. ಕೆಲವೆಡೆ ಬಿರುಗಾಳಿ, ಸಿಡಿಲು ಸಹಿತ ಮಳೆ ಅವಾಂತರ ಸೃಷ್ಟಿಸಿದೆ.
ಬೇಸಿಗೆ ಬಿಸಿಲಿನಿಂದ ಬಸವಳಿದ್ದಿದ್ದ ಜಿಲ್ಲೆಯ ಜನರಿಗೆ ಮಳೆಯಿಂದ ನಿರಾಳ ಭಾವ ನೀಡಿದೆ. 40 ಡಿಗ್ರಿ ಸೆಲ್ಸಿಯಸ್ ದಾಟಿದ್ದ ಉಷ್ಣತೆ ವಾತಾವರಣ ತಂಪಾಗಿದೆ. ಮುಂಗಾರು ಆರಂಭದ ಸನಿಹದಲ್ಲಿ ಮಳೆಯಾಗಿರುವುದು ಬಿತ್ತನೆಗೆ ಅನುಕೂಲವಾಗಿದೆ. ಬಿರುಗಾಳಿಗೆ ಅಲ್ಲಲ್ಲಿ ಗಿಡ-ಮರಗಳು ನೆಲಕ್ಕೆ ಉರುಳಿವೆ.
ಇನ್ನೂ ಶನಿವಾರ ಸಂಜೆ ಸುರಿದ ಮಳೆಗೆ ಕೊಲ್ಹಾರ ತಾಲ್ಲೂಕಿನ ಕವಲಗಿ ಗ್ರಾಮದ ಹಣಮಂತ ಛಲವಾದಿ ಅವರ ಹೊಲದಲ್ಲಿದ್ದ ಆಕಳು ಸಿಡಿಲು ಬಡಿದು ಸ್ಥಳದಲ್ಲಿ ಸಾವನ್ನಪ್ಪಿದೆ. ನಿಡಗುಂದಿ ತಾಲ್ಲೂಕಿನ ಹಾಲಿಹಾಳ ಗ್ರಾಮದ ಸಾಬಣ್ಣ ಬಿರಾದಾರ ಅವರ 2 ಆಡಿನ ಮರಿಗಳು ಸಿಡಿಲಿಗೆ ಮೃತ ಪಟ್ಟಿದದ್ದು, ಶಿವಸಂಗಪ್ಪ ಬೇವಿನಮಟ್ಟಿ ಅವರಿಗೆ ಸಿಡಿಲು ಬಡೆದಿದ್ದು ಸಣ್ಣಪುಟ್ಟ ಗಾಯಗಳಾಗಿವೆ.
ಬಳಬಟ್ಟಿ ಗ್ರಾಮದ ಮಲಪ್ಪ ಕೊಪ್ಪ ಅವರ ಕೋಳಿ ಸಾಗಾಣಿಕೆ ಶೇಡ್ ಬಿರುಗಾಳಿಗೆ ಪತ್ರಾಸ್ಗಳು ಹಾರಿಹೋಗಿದೆ. ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮದ ಪುಂಡಲಿಕ ಸಾಳುಂಕೆ ಅವರ ಎಮ್ಮೆ ಸಿಡಿಲಿಗೆ ಬಲಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಭಾನುವಾರ ಮುಂದುವರಿದ ಮಳೆ: ಶನಿವಾರ ಸುರಿದ ಬಿರುಗಾಳಿ, ಸಿಡಿಲು ಸಹಿತ ಮಳೆ ಭಾನುವಾರವೂ ಮುಂದುವರೆದಿದ್ದು ಜಿಲ್ಲೆಯ ಸಿಂದಗಿ, ನಿಡಗುಂದಿ, ಆಲಮಟ್ಟಿಯಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ತಿಕೋಟಾ, ಇಂಡಿ, ತಾಳಿಕೋಟೆ ಸೇರಿದಂತೆ ಹಲವೆಡೆ ಬಿರುಗಾಳಿ ಬೀಸುತ್ತಿದ್ದು, ಹೆಲವೆಡೆ ಮೋಡ ಕವಿದ ವಾತಾವರಣ ಕಂಡು ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.