ಹೊರ್ತಿ: ಸಮೀಪದ ಇಂಚಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಇರುವುದರಿಂದ ಸ್ಥಳೀಯರಿಗೆ ಸೂಕ್ತ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ.
ಒಬ್ಬರು ಎಂಬಿಬಿಎಸ್ ವೈದ್ಯರು, ಫಾರ್ಮಾಸಿಸ್ಟ್, ‘ಡಿ’ ಗ್ರೂಪ್ ನೌಕರ, ಕಿರಿಯ ಆರೋಗ್ಯ ಸಹಾಯಕಿ ಇಲ್ಲದೇ ಇರುವುದರಿಂದ ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಚಿಕಿತ್ಸಾ ಸೇವೆ ಸಿಗದೇ ಪರದಾಡುವಂತಾಗಿದೆ. ಬಾಣಂತಿಯರು ಹಾಗೂ ಬಡರೋಗಿಗಳು ಸರಿಯಾದ ಚಿಕಿತ್ಸೆಗಾಗಿ ದೂರದ ವಿಜಯಪುರ, ಚಡಚಣ, ಇಂಡಿ ಆಸ್ಪತ್ರೆಗೆ ತೆರಳುವಂತಾಗಿದೆ.
‘ಇಂಚಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂಚಗೇರಿ, ಕನಕನಾಳ, ಮಹಾವೀರನಗರ ತಾಂಡಾ-1, ಕಲ್ಯಾಳ ತಾಂಡಾ-2, ಕಿರೂನ ತಾಂಡಾ-3, ಕೇರಿ ತಾಂಡಾ, ಕನಕನಾಳ ತಾಂಡಾದ ರೋಗಿಗಳು ಬರುತ್ತಾರೆ. ಆದರೆ ಇಲ್ಲಿ ವೈದ್ಯರಿಲ್ಲದೇ ಇಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ’ ಎಂದು ಲಕ್ಷ್ಮಣ ರಾಠೋಡ, ರಮೇಶ ಜಾಧವ ಮತ್ತು ರಾಜು ಕನಮಡಿ ದೂರಿದ್ದಾರೆ.
‘ಈ ಹಿಂದೆ ಎಂಬಿಬಿಎಸ್ ವೈದ್ಯರಿದ್ದರು. ಆಗ ಜ್ವರ ಮೈ–ಕೈ ನೋವು ಬಂದು ಬಳಲಿದರೆ ಒಂದು ಇಂಜೆಕ್ಷನ್ ಮತ್ತು 3 ದಿನಗಳ ಮಾತ್ರೆ ಕೊಟ್ಟು ಕಳುಹಿಸುತ್ತಿದ್ದರು. ಅತಿ ಅವಶ್ಯಕತೆ ಇದ್ದವರಿಗೆ ಸಲೈನ್ ಹಚ್ಚುತ್ತಿದ್ದರು. ಕೂಡಲೇ ಆರಾಮವಾಗುತ್ತಿತ್ತು. ಈಗ ಅದೂ ಸಾಧ್ಯವಿಲ್ಲದಂತಾಗಿದೆ’ ಎಂದು ಕನಕನಾಳ ಗ್ರಾಮದ ರಾಮಚಂದ್ರ ಬಡಿಗೇರ-ಬೆನಕನಹಳ್ಳಿ ಮತ್ತು ರಮೇಶ ಮಾದರ ಬೇಸರ ವ್ಯಕ್ತ ಪಡಿಸಿದರು.
ಇಂಚಗೇರಿ ಮಹಾವೀರನಗರ ಕೇರಿ ತಾಂಡಾ-1ರಲ್ಲಿ ಚರಂಡಿ ಇಲ್ಲದೇ ಇರುವುದರಿಂದ ಮಳೆ ಬಂದರೇ ಕಸ ಕಡ್ಡಿಗಳಿಂದ ತುಂಬಿದ ಕೊಳಚೆ ನೀರು ರಸ್ತೆಯ ಮೇಲೆ ಹರಿದು ಇಡಿ ಓಣಿಯೆಲ್ಲ ಗಬ್ಬೆದ್ದು ನಾರುತ್ತಿದೆ. ಕೂಡಲೇ ಇಂಚಗೇರಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಮತ್ತು ಪಿಡಿಒ ಗಮನ ಹರಿಸಿ ರಸ್ತೆಯ ಬದಿ ಸರಿಯಾದ ಚರಂಡಿ ನಿರ್ಮಿಸಿ ಕೋಳಚೆ ನೀರು ಹರಿದುಹೋಗುವಂತೆ ಮಾಡಬೇಕು’ ಎಂದು ಗೇಮಲಾಬಾಯಿ ಜಾಧವ ಮತ್ತು ಸುಶೀಲಾಬಾಯಿ ರಾಠೋಡ ಒತ್ತಾಯಿಸಿದ್ದಾರೆ.
ಚರಂಡಿ ನಿರ್ಮಾಣಕ್ಕೆ ಕ್ರಮ: ಪಿಡಿಒ
ಇಂಚಗೇರಿ ಮಹಾವೀರನಗರ ಕೇರಿ ತಾಂಡಾ-1 ರಲ್ಲಿ ಚರಂಡಿ ಇಲ್ಲದಿರುವುದು ಮತ್ತು ಕೊಳಚೆ ನೀರು ರಸ್ತೆಯ ಮೇಲೆ ಹರಿಯುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಪಂಚಾಯಿತಿ ಸಿಬ್ಬಂದಿ ಕಳುಹಿಸಿ ಚರಂಡಿ ನಿರ್ಮಾಣಕ್ಕೆ ಹಾಗೂ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಪ್ಪ ಪೂಜಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.