ವಿಜಯಪುರ: ‘ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ, ಪಕ್ಷದ ವರಿಷ್ಠರು ಚುನಾವಣೆ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಿದ್ದಾರೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲ ವಿರೋಧಿಗಳು, ಟಿಕೆಟ್ ಆಕಾಂಕ್ಷಿಗಳು ನನಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಹಾರ್ಟೇ ಇಲ್ಲ, ಅಟ್ಯಾಕ್ ಆಗೋದು ಎಲ್ಲಿ? ಇಂತಹ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು’ ಎಂದರು.
ಆಸ್ತಿ ಹೆಚ್ಚಳವಾಗಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಹೌದು, ನನ್ನ ಆಸ್ತಿ ನೀವು ಬರೆದಿರುವುದಕ್ಕಿಂತಲೂ ಹೆಚ್ಚು ಹೆಚ್ಚಳವಾಗಿದೆ. 20 ವರ್ಷಗಳ ಹಿಂದೆ ಲಕ್ಷದಷ್ಟಿದ್ದ ನನ್ನ ಆಸ್ತಿ ಮೌಲ್ಯ ಈಗ ಕೋಟಿಯಷ್ಟಾಗಿದೆ. ಇದು ನನ್ನ ಮತ್ತು ನನ್ನ ಮಕ್ಕಳ ಸ್ವಂತ ಶ್ರಮದಿಂದ ಸಂಪಾದಿಸಿರುವ ಆಸ್ತಿಯೇ ಹೊರತು, ನಾನು ಯಾವುದೇ ಭ್ರಷ್ಟಾಚಾರ ಮಾಡಿ ಅಥವಾ ರಸ್ತೆ ಗೆಬರಿ ಹಣ ಮಾಡಿಲ್ಲ. ವಿಜಯಪುರ ನಗರದ ಗಾಂಧಿ ಚೌಕದಲ್ಲಿರುವ ಮಹಾತ್ಮನಷ್ಟೇ ಶುದ್ಧ, ಪ್ರಾಮಾಣಿಕವಾಗಿದ್ದೇನೆ’ ಎಂದು ಸಮರ್ಥಿಸಿಕೊಂಡರು.
‘ಸಂಸತ್ತಿನಲ್ಲಿ ನೀವು ಒಂದೇ ಒಂದೂ ಪ್ರಶ್ನೆ ಕೇಳಿಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಜಿಗಜಿಣಗಿ, ‘ನನ್ನ ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸದ ಬಗ್ಗೆ ಸಂಬಂಧಿಸಿದ ಸಚಿವರಿಗೆ, ಪ್ರಧಾನಿಯರಿಗೆ ಪತ್ರ ಮುಖೇನ ನಾನು ಮನವಿ ಮಾಡಿ ಕೆಲಸ ಮಾಡಿಸಿಕೊಳ್ಳುತ್ತೇನೆ. ಹೀಗಾಗಿ ಸದನದಲ್ಲಿ ಪ್ರಶ್ನೆ ಕೇಳುವ ಪ್ರಮೇಯವೇ ಬರುವುದಿಲ್ಲ. ಸದನದಲ್ಲಿ ಪ್ರಶ್ನೆ ಕೇಳಿ ಪ್ರಚಾರ ಗಿಟ್ಟಿಸುವ ಅಗತ್ಯ ನನಗಿಲ್ಲ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.