ವಿಜಯಪುರ: ಕೃಷ್ಣಾ ನದಿಯ ನೀರು, ಫಲವತ್ತಾದ ಜಮೀನಿನ ಸದ್ಭಳಕೆ ಮಾಡಿಕೊಳ್ಳಲು ರೈತರು ಲಾಭದಾಯಕ ವಾಣಿಜ್ಯ ಬೆಳೆಗಳಿಗೆ ಒತ್ತು ಕೊಡಬೇಕು. 15 ತಿಂಗಳಲ್ಲಿ ಎಂಆರ್ಎನ್-ನಡಹಳ್ಳಿ ಸಕ್ಕರೆ ಕಾರ್ಖಾನೆ ಲೋಕಾರ್ಪಣೆಗೊಳ್ಳಲಿದ್ದು ರೈತರಿಗೆ ವಾರಕ್ಕೊಮ್ಮೆ ಬಿಲ್ ಜಮಾ ಮಾಡಲು ಬದ್ದರಾಗಿದ್ದೇವೆ. ರೈತರ ಜಮೀನಿನ ಮೇಲೆ ಭೋಜಾ ಕೂಡಿಸೊಲ್ಲ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಬಸರಕೋಡ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಎಂಆರ್ಎನ್-ನಡಹಳ್ಳಿ ಎಥೆನಾಲ್, ಅಲೈಡ್ ಇಂಡಸ್ಟ್ರೀಜ್ ಸಕ್ಕರೆ ಕಾರ್ಖಾನೆಯ ಕಟ್ಟಡ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರೈತರ ಹೊಲಗಳಿಗೆ ಪಂಪ್ಸೆಟ್, ಬೀಜ ಗೊಬ್ಬರ ಕಾರ್ಖಾನೆ ವತಿಯಿಂದಲೇ ಕೊಡುತ್ತೇವೆ. ಮಳೆಗಾಲ ಶುರುವಾದ ಕೂಡಲೇ ಪ್ರತಿಯೊಬ್ಬರೂ ಕಬ್ಬು ಬೆಳೆಯಲು ಪ್ರಾರಂಭಿಸಬೇಕು ಎಂದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ನಿರಾಣಿಯವರು ಸಕ್ಕರೆ ಉದ್ಯಮದ ಧೃವತಾರೆ. ಬರಗಾಲದಲ್ಲೂ ಹೆಚ್ಚು ಕಬ್ಬು ನುರಿಸಿದ ಕೀರ್ತಿ ಅವರದ್ದಾಗಿದೆ. ಏಷ್ಯಾ ಖಂಡದಲ್ಲಿ ಹೆಚ್ಚು ಇಥೆನಾಲ್ ಉತ್ಪಾದನೆ ಮಾಡುತ್ತಿದ್ದಾರೆ. ನನ್ನ ಹತ್ತು ವರ್ಷದ ಕಾರ್ಖಾನೆ ಕನಸು ಈಗ ನನಸಾಗುತ್ತಿದ್ದು, ರೈತರ ಬದುಕಿಗೆ ದಾರಿದೀಪವಾಗಲಿದೆ ಎಂದು ತಿಳಿಸಿದರು.
ಕಾರ್ಖಾನೆಯ ನಿರ್ದೇಶಕ ಭರತಗೌಡ ಪಾಟೀಲ, ವಿಶಾಲ ನಿರಾಣಿ, ಢವಳಗಿಯ ಘನಮಠೇಶ್ವರ ಸ್ವಾಮೀಜಿ, ಉದ್ಯಮಿ ಧನುಷ್ ಶ್ರೀನಿವಾಸ, ಶರತ್ ಪಾಟೀಲ ನಡಹಳ್ಳಿ, ಅಶೋಕ ತಡಸದ, ಎಂ.ಆರ್.ನಾಡಗೌಡ, ಮಲಕೇಂದ್ರಗೌಡ ಪಾಟೀಲ, ಮುತ್ತು ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.