ವಿಜಯಪುರ: ‘ಬಿಜೆಪಿ ದಲಿತ ವಿರೋಧಿ. ಆ ಪಕ್ಷ ಸೇರುವುದು ಬೇಡ ಎಂದು ಅನೇಕ ಸ್ನೇಹಿತರು ನನ್ನೊಂದಿಗೆ ಮೊದಲೇ ವಾದ ಮಾಡಿದರೂ ಯೋಚಿಸದೇ ಸೇರಿದೆ. ಬಳಿಕ ಏಳು ಬಾರಿ ಸಂಸದನಾದೆ. ಆದರೂ ನನಗೆ ಕೇಂದ್ರ ಸಚಿವ ಸ್ಥಾನ ಸಿಗಲಿಲ್ಲ’ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸಂಸದರ ಕಚೇರಿಯ ಪೂಜೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಕ್ಷೇತ್ರದ ಜನರು ಬೇಸರಗೊಂಡಿದ್ದಾರೆ. ಛೀ,ಥೂ ಎನ್ನುತ್ತಿದ್ದಾರೆ. ನನಗೆ ಪಕ್ಷದಿಂದ ಅನ್ಯಾಯವಾಗಿದೆ’ ಎಂದು ಖಾರವಾಗಿ ಹೇಳಿದರು.
‘ದಲಿತ ಮನುಷ್ಯನಾಗಿ ದಕ್ಷಿಣ ಭಾರತದಿಂದ ನಾನೊಬ್ಬನೇ ಏಳು ಬಾರಿ ಸಂಸದನಾಗಿ ಗೆದ್ದಿರುವೆ. ಕೇಂದ್ರ ಸರ್ಕಾರದಲ್ಲಿ ಈ ಬಾರಿ ಎಲ್ಲ ಮೇಲ್ಜಾತಿಯವರೇ ಸಚಿವರಾಗಿದ್ದಾರೆ. ದಲಿತರು ಬಿಜೆಪಿಗೆ ಮತ ಹಾಕಿಲ್ಲವೇ’ ಎಂದು ಅವರು ಪ್ರಶ್ನಿಸಿದರು.
‘ಮನಸ್ಸಿಗೆ ತುಂಬಾ ನೋವಾಗಿದೆ. ವೈಯಕ್ತಿವಾಗಿ ನನಗೆ ಕೇಂದ್ರ ಸಚಿವ ಸ್ಥಾನ ಅವಶ್ಯಕತೆ ಇಲ್ಲ. ನನಗೆ ಸಚಿವ ಸ್ಥಾನ ನೀಡಬೇಕು ಎಂಬುದು ನನ್ನ ಕ್ಷೇತ್ರದ ಜನರ ಒತ್ತಡ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.