ವಿಜಯಪುರ: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳ ಸುಧಾರಣೆ, ಸ್ವಚ್ಛತೆ, ರೋಗಗಳ ನಿಯಂತ್ರಣದಲ್ಲಿ ಸಾಧನೆ ಮಾಡಿ ಆರೋಗ್ಯ ಸಂಸ್ಥೆಗಳ ಉತ್ತೇಜನಕ್ಕಾಗಿ ಪ್ರತಿ ವರ್ಷ ನೀಡುವ ಕಾಯಕಲ್ಪ ಪ್ರಶಸ್ತಿಯು ಪ್ರಸಕ್ತ 2022-23ನೇ ಸಾಲಿನಲ್ಲಿ ಜಿಲ್ಲೆಯ 40 ಆರೋಗ್ಯ ಸಂಸ್ಥೆಗಳಿಗೆ ಪ್ರಶಸ್ತಿ ದೊರೆತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ತಿಳಿಸಿದ್ದಾರೆ.
2022-23ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟು 40 ಆರೋಗ್ಯ ಸಂಸ್ಥೆಗಳು ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದ್ದು, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳ ವಿಭಾಗದಲ್ಲಿ ಬಸವನಬಾಗೇವಾಡಿ ತಾಲ್ಲೂಕು ಆಸ್ಪತ್ರೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರ ಜಿಲ್ಲೆಯ ಅತ್ಯುತ್ತಮ ಪ್ರಾಥಮಿಕ ಕೇಂದ್ರ ಪ್ರಶಸ್ತಿ ಪಡೆದಿದೆ.
ನಗರ ಪ್ರಾಥಮಿಕ ಕೇಂದ್ರ ವಿಭಾಗದಲ್ಲಿ ಬಾಗಲಕೊಟೆ ಮತ್ತು ವಿಜಯಪುರ ಕ್ಲಸ್ಟರ್ ಮಟ್ಟದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದರ್ಗಾ ಅತ್ಯುತ್ತಮ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಶಸ್ತಿ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ವಿಭಾಗದಲ್ಲಿ ಎಸ್ಸಿ-ಎಚ್ಡಬ್ಲೂಸಿ ಕಗ್ಗೋಡ ಜಿಲ್ಲೆಗೆ ಪ್ರಥಮ ಸ್ಥಾನ, ಯತ್ನಾಳ ಮೊದಲನೇ ರನ್ನರ್ ಅಪ್ ಕಾಯಕಲ್ಪ ಪ್ರಶಸ್ತಿ ಪಡೆದಿದೆ. ಉಳಿದ 35 ಆರೋಗ್ಯ ಸಂಸ್ಥೆಗಳು ಸಮಾಧಾನಕರ ಪ್ರಶಸ್ತಿ ಪಡೆದಿವೆ.
ಸಾರ್ವಜನಿಕ ಆಸ್ಪತ್ರೆಗಳಿಗೆ ಉತ್ತಮ ಗುಣಮಟ್ಟದ ಮಾನದಂಡನುಸಾರವಾಗಿ ಸಾರ್ವಜನಿಕರಿಗೆ ನೀಡುವ ಉತ್ತಮ ಆರೋಗ್ಯ ಸೇವೆಯನ್ನು ಗಮನಿಸಿ, ರಾಷ್ಟ್ರೀಯ ಮಟ್ಟದ ಎನ್.ಕ್ಯೂ.ಎ.ಎಸ್ ಪ್ರಶಸ್ತಿ ನೀಡಲಾಗುತ್ತಿದ್ದು, ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರ್ತಿ, ತಿಕೋಟಾ, ಹೊನವಾಡ, ಮನಗೂಳಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದರ್ಗಾ ಮತ್ತು ಶಾಂತಿನಗರ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಯಂಬತ್ನಾಳ ಸೇರಿದಂತೆ 8 ಆರೋಗ್ಯ ಸಂಸ್ಥೆಗಳು ರಾಷ್ಟ್ರೀಯ ಮಟ್ಟದ ಎನ್ಕ್ಯೂಎಎಸ್ ಪ್ರಶಸ್ತಿ ಪಡೆದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.