ADVERTISEMENT

ವಿಜಯಪುರ: ಭೂತನಾಳ ಕೆರೆಗೆ ಹರಿದ ಕೃಷ್ಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2024, 4:29 IST
Last Updated 12 ಮೇ 2024, 4:29 IST
   

ವಿಜಯಪುರ: ‘ನಗರಕ್ಕೆ ಕುಡಿಯುವ ನೀರು ಪೂರೈಸುವ ಭೂತನಾಳ ಕೆರೆ ಮಳೆಯ ಅಭಾವದಿಂದ ಬತ್ತಿ ಹೋಗಿತ್ತು. ಇದೀಗ ಕೃಷ್ಣಾ ನದಿಯಿಂದ ಭೂತನಾಳ, ಬೇಗಂ ತಲಾಬ್ ಮತ್ತು ಮಮದಾಪುರ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಚಾಲನೆಗೊಂಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

‘ನಗರದ ಜನತೆಗೆ ಅಮೃತ್‌ ಯೋಜನೆಯಡಿ ದಿನದ 24 ಗಂಟೆ ಕುಡಿಯುವ ನೀರಿನ ಸೌಲಭ್ಯ ನೀಡುವ ಯೋಜನೆ ಇದಾಗಿದ್ದು, ಮಳೆಯ ಅಭಾವದಿಂದ ಜುಲೈ 20ರ ಹೊತ್ತಿಗೆ ಬತ್ತಿ ಹೋಗಿದ್ದ ಭೂತನಾಳ ಕೆರೆಯಲ್ಲಿ ನೀರು ಡೆಡ್ ಸ್ಟೋರೆಜ್‍ಗಿಂತಲೂ ಕಡಿಮೆಯಾಗಿತ್ತು. ಇದರಿಂದ ನಗರದ ಭೂತನಾಳ ಗ್ರಾಮ, ಎಂ.ಬಿ.ಪಾಟೀಲ್ ನಗರ, ಆದರ್ಶನಗರ, ಆಶ್ರಮ, ಬಿ.ಎಂ.ಪಾಟೀಲ್ ನಗರ, ವಿಜಯ ಕಾಲೇಜು, ಕೆ.ಎಚ್.ಬಿ ಕಾಲೊನಿ, ಚಾಲುಕ್ಯನಗರದ ಸುಮಾರು 13 ಸಾವಿರ ಮನೆಗಳಿಗೆ ನಳದ ಸಂಪರ್ಕ ಹೊಂದಿದೆ. 75 ಸಾವಿರಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು 10-15 ದಿನಗಳಿಗೊಮ್ಮೆ ಸಹಿತ ನೀರು ಸರಬರಾಜು ಮಾಡಲು ಹರಸಾಹಸ ಪಡುವಂತಾಗಿತ್ತು’ ಎಂದು ಹೇಳಿದ್ದಾರೆ.

‘ಇದೀಗ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಈ ನೀರಿನಿಂದ ಕೆರೆಗಳಿಗೆ ಹರಿಸಲು ಅಗತ್ಯ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿತ್ತು’ ಎಂದು ತಿಳಿಸಿದರು.‌

ADVERTISEMENT

ಕೃಷ್ಣಾನದಿಯಿಂದ ಲಿಂಗದಳ್ಳಿ ಜಾಕ್‌ವೆಲ್‍ನಿಂದ ನೀರೆತ್ತಿ ವಿಜಯಪುರದ ಐತಿಹಾಸಿಕ ಕೆರೆಗಳಾದ ಮಮದಾಪುರ, ಬೇಗಂ ತಲಾಬ್ ಮತ್ತು ಭೂತನಾಳ ಕೆರೆಗಳಿಗೆ ನೀರು ತುಂಬಿಸಲು ಎರಡು ಮೋಟಾರ್ ಅಳವಡಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.