ವಿಜಯಪುರ: ಸಾಹಿತ್ಯ ಚಟುವಟಿಕೆಗಳು ಇತ್ತೀಚೆಗೆ ಅರ್ಥಪೂರ್ಣವಾಗಿ, ನಿರಂತರವಾಗಿ ನಡೆಯುತ್ತಿರುವುದು ಜಿಲ್ಲೆಗೆ ಹೆಮ್ಮೆ ತರುವ ಸಂಗತಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಪಾಟೀಲ ಯಾಳಗಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಕಸಾಪ ಜಿಲ್ಲಾ, ತಾಲ್ಲೂಕು ಹಾಗೂ ನಗರ ಘಟಕಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಮರ್ಶಕ ಬಾಬುರಾವ್ ಮಹಾರಾಜ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರತಿಯೊಂದು ಸಾಹಿತ್ಯ ಚಟುವಟಿಕೆಗಳು ಗ್ರಾಮ, ಹೊಬಳಿ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಕವಿಗೋಷ್ಠಿ, ಜಾನಪದ ಸಂಭ್ರಮ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಸಿ ಕನ್ನಡದ ಕಂಪನ್ನು ಸೂಸುವ ಕಾಯಕ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಆಧುನಿಕ ಕೃಷಿ ಆವಿಷ್ಕಾರ ಕುರಿತು ಉಪನ್ಯಾಸ ನೀಡಿದ ಕೃಷಿ ಮಹಾವಿದ್ಯಾಲಯದ ಡಾ.ರವೀಂದ್ರ ಬೆಳ್ಳಿ, ಸಾಂಪ್ರದಾಯಿಕ ಕೃಷಿ ವಿಧಾನ, ರಾಸಾಯನಿಕ ರಹಿತ ಮತ್ತು ಸಹಿತ ಆಹಾರ ಉತ್ಪಾದನೆಯಲ್ಲಿ ದ್ವಿಗುಣ ಮಾಡುವ ವಿಧಾನ ತಿಳಿಸಿದರು.
‘ಬಸವಾದಿ ಶರಣರು ಮನುಕುಲಕ್ಕೆ ನೀಡಿದ ಕೊಡುಗೆ’ ಕುರಿತು ಉಪನ್ಯಾಸ ನೀಡಿದ ತಿಕೋಟಾ ಕಸಾಪ ಗೌರವ ಕಾರ್ಯದರ್ಶಿ ಶಿಲ್ಪಾ ಹಂಜಿ, ‘ಫ.ಗು. ಹಳಕಟ್ಟಿಯವರು ವಚನಗಳ ಸಂಶೋಧನೆ ಮಾಡದೆ ಹೋಗಿದ್ದರೆ ವಚನ ಸಾಹಿತ್ಯ ಅಪೂರ್ಣವಾಗುತ್ತಿತ್ತು’ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ತಿಕೋಟಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ರಮೇಶ ಮಸಬಿನಾಳ, ಡಾ. ಜ್ಯೋತಿ ಸಿರಗುಪ್ಪಿ ಡಾ. ಎಸ್. ಎಂ. ಸಿರಗುಪ್ಪಿ, ಅನ್ನಪೂರ್ಣ ಬೆಳ್ಳೆನವರ, ರಾಜೇಸಾಬ ಶಿವನಗುತ್ತಿ, ತಸ್ಕಿನ ಬಿಜಾಪುರ, ವಿಜಯಲಕ್ಮೀ ಹಳಕಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.