ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ನಿಯುಕ್ತಿಗೊಂಡಿರುವ ಮತಗಟ್ಟೆ ಅಧಿಕಾರಿಗಳಿಗೆ ಭಾನುವಾರ ಮೊದಲ ಹಂತದ ತರಬೇತಿ ನಡೆಯಿತು.
ಬೆಳಿಗ್ಗೆ ವಿವಿಧೆಡೆಗಳಿಂದ ನಿಯುಕ್ತಿಗೊಂಡ ಪಿಆರ್ಒ, ಎಪಿಆರ್ಒ ಸಿಬ್ಬಂದಿ ಆಗಮಿಸಿ ಹಾಜರಾತಿಗೆ ಸಹಿ ಮಾಡಿದ ನಂತರ ತಮಗೆ ನಿಗದಿ ಪಡಿಸಿದ ಕೋಣೆಗಳಿಗೆ ತೆರಳಿ ಮಾಸ್ಟರ್ ಟ್ರೇನರ್ಗಳಿಂದ ಮತಗಟ್ಟೆ ಅಧ್ಯಕ್ಷಾಧಿಕಾರಿಗಳ ಮತ್ತು ಮತಗಟ್ಟೆ ಅಧಿಕಾರಿಗಳ ಕರ್ತವ್ಯಗಳು, ಚುನಾವಣಾ ಆಯೋಗ ನೀಡಿದ ಮಾಹಿತಿಗಳ ಕುರಿತು ತರಬೇತಿ ಪಡೆದುಕೊಂಡರು.
ಪ್ರಾತ್ಯಕ್ಷಿಕೆ ಮೂಲಕ ವಿದ್ಯುನ್ಮಾನ ಮತಯಂತ್ರಗಳ ನಿರ್ವಹಣೆ ಮಾಡುವ ಕುರಿತು ಮಾಸ್ಟರ್ ಟ್ರೇನರ್, ಸೆಕ್ಟರ್ ಅಧಿಕಾರಿಗಳ ಮಾರ್ಗದರ್ಶನ ನೀಡಿದರು. ಜಿಲ್ಲಾ ತರಬೇತಿ ನೋಡಲ್ ಅಧಿಕಾರಿ ಶಂಕರಗೌಡ ಸೋಮನಾಳ ತರಬೇತಿ ಕೇಂದ್ರ ವೀಕ್ಷಿಸಿದರು.
ನ್ಯಾಯಸಮ್ಮತ, ಪಾರದರ್ಶಕ ಮತದಾನ ನಡೆಯುವಲ್ಲಿ ಚುನಾವಣೆಗೆ ನಿಯುಕ್ತಿಗೊಂಡ ಸಿಬ್ಬಂದಿ ಪಾತ್ರ ಮುಖ್ಯವಾಗಿದೆ. ತರಬೇತಿಯಲ್ಲಿ ತಮಗೆ ಎದುರಾಗಬಹುದಾದ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಸಿಬ್ಬಂದಿ ಸೂಕ್ತವಾದ ತರಬೇತಿ ಪಡೆದುಕೊಂಡು ಈ ತಾಲ್ಲೂಕಿನ ಹೆಸರನ್ನು ತರಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ಅವರು ಪ್ರತಿ ತರಬೇತಿ ಕೋಣೆಗೆ ಭೇಟಿ ನೀಡಿ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
ಬಸವನಬಾಗೇವಾಡಿ ತಹಶೀಲ್ದಾರ್ ವೈ.ಎಸ್.ಸೋಮನಕಟ್ಟಿ, ನಿಡಗುಂದಿ ತಹಶೀಲ್ದಾರ್ ನೀಲಪ್ರಭ, ಕೊಲ್ಹಾರ ತಹಶೀಲ್ದಾರ್ ಎಸ್.ಎಸ್. ನಾಯಕಲಮಠ, ಮಹೇಶ ಬಳಗಾನೂರ, ಎಸ್.ಜಿ.ಇಂಗಳೆ, ಅನಿಲ ಅವಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.