ಮುದ್ದೇಬಿಹಾಳ: ಬಡವರಿಗೆ ಪಂಚ ಗ್ಯಾರಂಟಿ ಯೋಜನೆಗಳು ತಲುಪಿದ್ದು, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ರಾಜು ಆಲಗೂರ ಜಯಗಳಿಸುವುದು ಗ್ಯಾರಂಟಿ ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ತಾಲ್ಲೂಕಿನ ಶಿರೋಳದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಒಮ್ಮೆಯೂ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಅವರ ಕೊಡುಗೆ ಶೂನ್ಯವಾಗಿದ್ದು ಕೋಮುವಾದಿಗಳಿಗೆ ಮತ ನೀಡಬೇಡಿ ಎಂದು ಹೇಳಿದರು.
ಯುವ ಮುಖಂಡ ಬುಡ್ಡೇಸಾಬ ಚಪ್ಪರಬಂದ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಈ ದೇಶಕ್ಕೆ ಸುಳ್ಳುಗಳನ್ನು ಕೊಟ್ಟಿರುವ ನಾಯಕ. ಅವರಿಂದ ದೊಡ್ಡ ದೊಡ್ಡ ಉದ್ಯಮಿಗಳ ಉದ್ಧಾರವಾಗಿದೆಯೇ ಹೊರತು ಬಡವರ ಉದ್ಧಾರವಾಗಿಲ್ಲ. ಬಡವರ ಖಾತೆಗೆ ₹15 ಲಕ್ಷ ಹತ್ತು ವರ್ಷವಾದರೂ ಬರಲೇ ಇಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ಕಾಂಗ್ರೆಸ್ ಮುಖಂಡರಾದ ಗ್ರಾಪಂ ಮಾಜಿ ಸದಸ್ಯ ಶಂಕರಗೌಡ ಪಾಟೀಲ್,ಚೆನ್ನಪ್ಪ ವಿಜಯಕರ್,ವಾಲ್ಮೀಕಿ ಸಮಾಜದ ಮುಖಂಡ ಹುಲಗಪ್ಪ ನಾಯ್ಕಮಕ್ಕಳ,ರಾಮಣ್ಣ ರಾಜನಾಳ,ತಿಪ್ಪಣ್ಣ ದೊಡಮನಿ ಇದ್ದರು. ಗ್ರಾಮದ ಮತದಾರರಿಗೆ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.