ADVERTISEMENT

ಇಂಡಿ | ಮುಂಗಾರು ಬಿರುಸು: ಬಿತ್ತನೆ ಚುರುಕು

ತಾಲ್ಲೂಕಿನಲ್ಲಿ ನಿರೀಕ್ಷೆಗೂ ಮೀರಿ ಮಳೆ: ರೈತರಲ್ಲಿ ಸಂತಸ

ಎ.ಸಿ.ಪಾಟೀಲ
Published 12 ಜೂನ್ 2024, 5:58 IST
Last Updated 12 ಜೂನ್ 2024, 5:58 IST
ಇಂಡಿ ತಾಲ್ಲೂಕಿನ ಜಮೀನೊಂದರಲ್ಲಿ ರೈತರು ಬಿತ್ತನೆ ಬೀಜ ನಾಟಿ ಮಾಡುತ್ತಿರುವುದು
ಇಂಡಿ ತಾಲ್ಲೂಕಿನ ಜಮೀನೊಂದರಲ್ಲಿ ರೈತರು ಬಿತ್ತನೆ ಬೀಜ ನಾಟಿ ಮಾಡುತ್ತಿರುವುದು   

ಇಂಡಿ: ಪ್ರಸಕ್ತ ವರ್ಷದಲ್ಲಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ.

ತೊಗರಿ, ಸಜ್ಜೆ, ಮುಸುಕಿನ ಜೋಳ, ಹೆಸರು, ಶೇಂಗಾ, ನವಣೆ, ಎಳ್ಳು, ಸೂರ್ಯಕಾಂತಿ ಮುಂತಾದ ಬೆಳೆಗಳ ಬಿತ್ತನೆಗೆ ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ ಸರಾಸರಿ 102.0 ಮಿ.ಮೀ ಮಳೆಯಾಗಬೇಕು. ಆದರೆ, ಜೂನ್ 10ರವೆರೆಗೆ ಸರಾಸರಿ ಮಳೆ ಮೀರಿ 131.2 ಮಿ.ಮೀ ಮಳೆಯಾಗಿದೆ. ಹೀಗಾಗಿ ಜಮೀನುಗಳು ಸಂಪೂರ್ಣ ತೇವಾಂಶವಾಗಿದ್ದು, ಬಿತ್ತನೆಗೆ ಅನುಕೂಲ ಕಲ್ಪಿಸಿದೆ.

ADVERTISEMENT

ಇಂಡಿ- 201.7 ಮಿ.ಮೀ, ಅಗರಖೇಡ- 183.5 ಮಿ.ಮೀ, ನಾದ (ಕೆಡಿ)- 194.2 ಮಿ.ಮೀ, ಹೊರ್ತಿ- 209.6 ಮಿ.ಮೀ, ಝಳಕಿ- 183.8 ಮಿ.ಮೀ, ಚಡಚಣ -167.9 ಮಿ.ಮೀ, ಹಲಸಂಗಿ- 219.9 ಮಿಲಿ ಮೀಟರ್ ಮಳೆಯಾಗಿದ್ದು, ತಾಲ್ಲೂಕಿನ ಎಲ್ಲಾ ಭಾಗದ ರೈತರು ಸಂತಸದಲ್ಲಿದ್ದಾರೆ.

ಮುಂಗಾರು ಹಂಗಾಮಿನಲ್ಲಿ 54,156 ಹೆಕ್ಟೇರ್ ನೀರಾವರಿ ಪ್ರದೇಶ, 1,00,978 ಹೆಕ್ಟೇರ್ ಖುಸ್ಕಿ ಪ್ರದೇಶ ಸೇರಿ ಒಟ್ಟು 1,55,134 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

ನೀರಾವರಿ ಪ್ರದೇಶದಲ್ಲಿ ಮೆಕ್ಕೆಜೋಳ 13,261 ಹೆಕ್ಟೇರ್, ಸಜ್ಜೆ– 1040 ಹೆಕ್ಟೇರ್, ತೊಗರಿ– 4,750 ಹೆಕ್ಟೇರ್‌, ಸೂರ್ಯಕಾಂತಿ– 950 ಹೆಕ್ಟೇರ್, ಶೇಂಗಾ– 1 ಸಾವಿರ ಹೆಕ್ಟೇರ್, ಹತ್ತಿ– 10,145 ಹೆಕ್ಟೇರ್, ಕಬ್ಬು–16,000 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲು ಗುರಿ ಹೊಂದಲಾಗಿದೆ. 

ಖುಸ್ಕಿ ಪ್ರದೇಶದಲ್ಲಿ ಮೆಕ್ಕೆಜೋಳ– 2,455 ಹೆಕ್ಟೇರ್, ಸಜ್ಜೆ- 6 ಸಾವಿರ ಹೆಕ್ಟೇರ್, ತೊಗರಿ–87 ಸಾವಿರ ಹೆಕ್ಟೇರ್, ಶೇಂಗಾ– 200 ಹೆಕ್ಟೇರ್, ಸೂರ್ಯಕಾಂತಿ– 2,900 ಹೆಕ್ಟೇರ್, ಹತ್ತಿ– 1,680 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

‘ನವಣೆ, ಬರಗು, ಹೆಸರು, ಹುರಲಿ, ಉದ್ದು, ಮಡಿಕೆ, ಅಲಸಂದಿ, ಎಳ್ಳು, ಗುರೆಳ್ಳು, ಸೋಯಾ ಅವರೆ, ಅಗಸೆ ಮುಂತಾದ ಬೆಳೆಗಳು ನೀರಾವರಿ ಮತ್ತು ಖುಸ್ಕಿ ಸೇರಿ 1,55,134 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

ಬಿತ್ತನೆ ಬೀಜಕ್ಕಿಲ್ಲ ಕೊರತೆ ತಾಲ್ಲೂಕಿನಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ. ಹೆಸರು– 7.20 ಕ್ವಿಂಟಲ್ ಸಜ್ಜೆ– 32.51 ಕ್ವಿಂಟಲ್ ಮುಸುಕಿನ ಜೋಳ (ಮೆಕ್ಕೆಜೋಳ) 454.32 ಕ್ವಿಂಟಲ್ ಸೂರ್ಯಕಾಂತಿ– 21.09 ಕ್ವಿಂಟಲ್ ತೊಗರಿ– 1700 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ. ಶೇಂಗಾ ಬೆಳೆ ಬಿತ್ತನೆಗೆ ಇನ್ನೂ ಅವಕಾಶವಿದ್ದು ಕೆಲವೇ ದಿನಗಳಲ್ಲಿ ಬೀಜ ದೊರೆಯಲಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

ತಾಲ್ಲೂಕಿನ ಶೇ 9.16ರಷ್ಟು ಬಿತ್ತನೆಯಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಬಿತ್ತನೆಯ ಗುರಿ ತಲುಪುತ್ತೇವೆ
ಮಹಾದೇವಪ್ಪ ಏವೂರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.