ADVERTISEMENT

‘ಬರಗಾಲ ನಿರ್ವಹಣೆಗೆ ನರೇಗಾ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 14:51 IST
Last Updated 27 ಮಾರ್ಚ್ 2024, 14:51 IST
ಮುದ್ದೇಬಿಹಾಳ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಉದ್ಯೋಗ ಖಾತ್ರಿ ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯಕಬಂಧುಗಳಿಗೆ ಬುಧವಾರ ಆಯೋಜಿಸಿದ್ದ ‘ಕಾಯಕಬಂಧುಗಳಿಗೆ ಕಾರ್ಯಾಗಾರ’ಕ್ಕೆ ತಾಲ್ಲೂಕು ಪಂಚಾಯಿತಿ ಇಒ ಎಸ್.ಎಸ್.ಕಲ್ಮನಿ ಚಾಲನೆ ನೀಡಿದರು
ಮುದ್ದೇಬಿಹಾಳ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಉದ್ಯೋಗ ಖಾತ್ರಿ ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯಕಬಂಧುಗಳಿಗೆ ಬುಧವಾರ ಆಯೋಜಿಸಿದ್ದ ‘ಕಾಯಕಬಂಧುಗಳಿಗೆ ಕಾರ್ಯಾಗಾರ’ಕ್ಕೆ ತಾಲ್ಲೂಕು ಪಂಚಾಯಿತಿ ಇಒ ಎಸ್.ಎಸ್.ಕಲ್ಮನಿ ಚಾಲನೆ ನೀಡಿದರು   

ಪ್ರಜಾವಾಣಿ ವಾರ್ತೆ

ಮುದ್ದೇಬಿಹಾಳ: ‘ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದೆ. ಕೆಲಸದ ಬೇಡಿಕೆ ಅರ್ಜಿಗಳನ್ನು ಸಂಗ್ರಹಿಸಿ ಗ್ರಾಮ ಪಂಚಾಯಿತಿಗೆ ಸಲ್ಲಿಸಿದರೆ, ಏ.1 ರಿಂದ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಕಲ್ಮನಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ‘ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ’ ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯಕಬಂಧುಗಳಿಗೆ ಬುಧವಾರ ಆಯೋಜಿಸಲಾಗಿದ್ದ ‘ಕಾಯಕಬಂಧುಗಳಿಗೆ ಕಾರ್ಯಾಗಾರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ಕಾಯಕ ಬಂಧುಗಳು ಮೊದಲು ಸಂಘಟಿತರಾಗಬೇಕು. ಸಕ್ರಿಯ ನರೇಗಾ ಕೂಲಿಕಾರರನ್ನು ಒಗ್ಗೂಡಿಸಿ ಕೆಲಸಕ್ಕೆ ಬರುವಂತೆ ಪ್ರೇರೆಪಿಸಬೇಕು. ಒಂದು ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 600 ರಿಂದ 800ವರೆಗೆ ಕೂಲಿಕಾರರಿಗೆ ಕೆಲಸ ಒದಗಿಸಲು ಕಾಯಕಬಂಧುಗಳು ಸನ್ನದ್ಧರಾಗಬೇಕು. ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಸಹಾಯಕ ನಿರ್ದೇಶಕ ಖೂಭಾಸಿಂಗ ಜಾಧವ್ ಮಾತನಾಡಿ, ಕಾಯಕಬಂಧುಗಳ ಕರ್ತವ್ಯ, ನಿರ್ವಹಿಸಬೇಕಾದ ಕೆಲಸಗಳು ಮತ್ತು ನರೇಗಾ ಕೂಲಿಕಾರರ ಹಕ್ಕುಗಳ ಬಗ್ಗೆ ತಿಳಿಸಿದರು.

‘2024-2025ನೇ ಸಾಲಿನ ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನರೇಗಾ ಕೂಲಿಕಾರರು ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದರೆ ಕೆಲಸ ನೀಡಲಾಗುವುದು’ ಎಂದು ಗ್ರಾಮೀಣ ಉದ್ಯೋಗ ಖಾತ್ರೆ ಸಹಾಯಕ ನಿರ್ದೇಶಕ ಪಿ.ಎಸ್.ಕಸನಕ್ಕಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ಶಂಕರಗೌಡ ಯಾಳವಾರ, ತಾಲ್ಲೂಕು ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ಬಿಎಫ್‌ಟಿಗಳು, ಗ್ರಾಮ ಕಾಯಕ ಮಿತ್ರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.