ಮುದ್ದೇಬಿಹಾಳ: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಾಕಿಕೊಂಡಿರುವ ಪ್ರಾಣಿಗಳಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ಕೊಡಿಸಬೇಕು ಎಂದು ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಹೇಳಿದರು.
ಪಟ್ಟಣದ ಸಿದ್ಧಗಂಗಾ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಕುನಾಯಿ ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು. ಅವುಗಳ ಆರೋಗ್ಯದ ಬಗ್ಗೆ ಪಶುವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು. ಬೀದಿನಾಯಿಗಳೊಂದಿಗೆ ಆಟವಾಡಲು ಮಕ್ಕಳಿಗೆ ಅವಕಾಶ ನೀಡಬಾರದು ನಾಯಿ ಕಚ್ಚಿದಾಗ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೇರದಾಳ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರಶಾಂತ್ ಕಡಿ ಮಾತನಾಡಿ, ಫ್ರೆಂಚ್ ವೈದ್ಯ ವಿಜ್ಞಾನಿ ಲೂಯಿ ಪ್ಯಾಶ್ಚರ್ ರೇಬೀಸ್ ಕಾಯಿಲೆಗೆ ಲಸಿಕೆ ಕಂಡು ಹಿಡಿದಿದ್ದಾರೆ. ಅವರ ಸ್ಮರಣೆಗಾಗಿ ಜಗತ್ತಿನಾದ್ಯಂತ ಶಾಲೆ ಕಾಲೇಜುಗಳಲ್ಲಿ ಮತ್ತು ಸಮುದಾಯದಲ್ಲಿ ರೇಬೀಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಮಾತನಾಡಿ, ಯಾವುದೇ ನಾಯಿಗಳು, ಬೆಕ್ಕುಗಳು, ಹುಚ್ಚು ಹಿಡಿದ ಪ್ರಾಣಿಗಳು ಕಚ್ಚಿದಾಗ ತಕ್ಷಣ ಕಾರ್ಬೋಲಿಕ್ ಸೋಪು, ಡೆಟಾಲ್ ಸೋಪು ಅಥವಾ ಬಟ್ಟೆ ಸೋಪುಗಳಿಂದ ಚೆನ್ನಾಗಿ ತೊಳೆಯಬೇಕು. ನಂತರ ನಲ್ಲಿ ನೀರನ್ನು ಬಿಟ್ಟು ಕನಿಷ್ಠ 2ರಿಂದ 3 ನಿಮಿಷ ತೊಳೆದರೆ ಆ ವೈರಸ್ ಪ್ರಮಾಣ ಕಡಿಮೆ ಆಗುತ್ತದೆ ಎಂದರು.
ಕಾಲೇಜಿನ ಚೇರ್ಮನ್ ಮಹಾಂತಮ್ಮ ನಾಶಿ, ಉಪನ್ಯಾಸಕ ವಿನೋದ ಮೇತ್ರಿ, ದಿವ್ಯ ನಾಗರಾಳ ,ಆರೋಗ್ಯ ಇಲಾಖೆಯ ಹಿರಿಯ ಮೇಲ್ವಿಚಾರಕ ಐ.ಸಿ.ಮಾನಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.