ADVERTISEMENT

ವಿಜಯಪುರ | ಯತ್ನಾಳ ಭರವಸೆ ಬಳಿಕ ಧರಣಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:19 IST
Last Updated 18 ಜೂನ್ 2024, 15:19 IST
ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಾಗೂ ಭವನಕ್ಕೆ ಹೆಚ್ಚುವರಿ ಜಾಗ ನೀಡಲು ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ  ಮಂಗಳವಾರ ಭೇಟಿ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು 
ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಾಗೂ ಭವನಕ್ಕೆ ಹೆಚ್ಚುವರಿ ಜಾಗ ನೀಡಲು ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ  ಮಂಗಳವಾರ ಭೇಟಿ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು    

ವಿಜಯಪುರ: ನಗರದ ಮನಗೂಳಿ ಅಗಸಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಾಗೂ ಭವನಕ್ಕೆ ಹೆಚ್ಚುವರಿ ಜಾಗ ನೀಡಲು ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ 29 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೀಡಿರುವ ಭರವಸೆಗೆ ಸ್ಪಂದಿಸಿ, ಪ್ರತಿಭಟನಾನಿರತರು ಧರಣಿ ಕೈಬಿಟ್ಟರು.

ಶಾಸಕ ಮಾತನಾಡಿ, ಮನಗೂಳಿ ಅಗಸಿ ಬಳಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಉದ್ದೇಶಿತ ಜಾಗ ಸರ್ಕಾರದ್ದಾಗಿದೆ. ಆ ಜಾಗವನ್ನು ವಕ್ಫ್‌ ಆಸ್ತಿಯನ್ನಾಗಿ ಮಾಡಿಕೊಂಡಿದ್ದು, ಮರಳಿ ಸರ್ಕಾರಿ ಆಸ್ತಿಯನ್ನಾಗಿ ಮಾಡಲು ಎಲ್ಲಾ ರೀತಿಯ ಹೋರಾಟ ಮಾಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳು ಸಹ ನಮ್ಮಲ್ಲಿವೆ. ಸರ್ಕಾರಿ ಜಾಗ ಆದ ಬಳಿಕ ಅದೇ ಜಾಗದಲ್ಲಿ ದಲಿತ ಸಮುದಾಯದವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿರುವ ಸರ್ಕಾರಿ ಎರಡು ಎಕರೆ ಜಾಗದ ಪೈಕಿ ಒಂದು ಎಕರೆಯಲ್ಲಿ ಬಾಬು ಜಗಜೀವನ ರಾಮ್‌ ಅವರ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದ್ದು, ಅದರ ಸುತ್ತಲು ಕಾಂಪ್ಲೆಕ್ಸ್ ಸಹ ನಿರ್ಮಾಣ ಮಾಡಲಾಗುವುದು. ಆ ಅಂಗಡಿಗಳನ್ನು ಎಸ್.ಸಿ, ಎಸ್.ಟಿ ಸಮುದಾಯವದರಿಗೆ ನೀಡಲಾಗುವುದು. ಇದರ ಪಕ್ಕದಲ್ಲೇ 100X100 ಅಳತೆಯ ಜಾಗದಲ್ಲಿ ಅಂಬೇಡ್ಕರ್ ಸಮುದಾಯ ಭವನ ಸಹ ನಿರ್ಮಿಸಲಾಗುವುದು. ದಲಿತ ಸಮುದಾಯದವರಿಗೆ ಏನೇ ಅನ್ಯಾಯವಾದರೂ ನ್ಯಾಯ ಕೊಡಿಸಲು ಸದಾ ತಮ್ಮೊಂದಿಗೆ ಇರುವುದಾಗಿ ಅಭಯ ನೀಡಿದರು.

ADVERTISEMENT

ಬಬಲೇಶ್ವರ ನಾಕಾ ಬಳಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ನಿರ್ಮಾಣ ಮಾಡಲಾದ ಸರ್ದಾರ್‌ ವಲ್ಲಭಬಾಯ್‌ ಪಟೇಲ್ ವಾಣಿಜ್ಯ ಸಂಕೀರ್ಣದಲ್ಲಿ ಮುಸ್ಲಿಂ ಸಮುದಾಯದವರಿಗೆ ಅಂಗಡಿಗಳನ್ನು ಹಂಚಿಕೆ ಮಾಡಲು ಮೇಯರ್ ಹೇಳುತ್ತಿದ್ದಾರಂತೆ. ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಬೇರೆಯವರಿಗೆ ನೀಡಿದರೆ, ಹೋರಾಟ ಮಾಡುವುದಾಗಿ ತಿಳಿಸಿದ್ದೇನೆ ಎಂದು ಹೇಳಿದರು.

ಧರಣಿ ಸ್ಥಳಕ್ಕೆ ತೆರಳುವ ಮೊದಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಜೊತೆಗೆ ಸಭೆ ನಡೆಸಿದ ಶಾಸಕರು, ಸರ್ಕಾರಿ ಆಸ್ತಿಯನ್ನು ವಕ್ಫ್‌ ಬೋರ್ಡ್‌ಗೆ ಮಾಡಿಕೊಂಡಿರುವುದನ್ನು ಮರಳಿ ಸರ್ಕಾರಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ, ಬಿಜೆಪಿ ನಗರ ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟ, ಜವಾಹಾರ ಗೋಸಾವಿ, ಪ್ರೇಮಾನಂದ ಬಿರಾದಾರ, ಮುಖಂಡರಾದ ಮಡಿವಾಳ ಯಾಳವಾರ, ರಾಜಶೇಖರ ಭಜಂತ್ರಿ, ದಾದಾಸಾಹೇಬ ಬಾಗಾಯತ, ನಾಗಪ್ಪ ಗುಗ್ಗರಿ, ರವಿ ಗರಸಂಗಿ, ತಮ್ಮಣ್ಣ ಗಂಜನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.