ADVERTISEMENT

ಸಿದ್ದರಾಮಯ್ಯ ಅರ್ಥಶಾಸ್ತ್ರ ಸಂಪೂರ್ಣ ವಿಫಲ: ಯತ್ನಾಳ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:45 IST
Last Updated 22 ಜೂನ್ 2024, 15:45 IST
ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ವಿಜಯಪುರದ ಮನಗೂಳಿ ರಿಂಗ್‌ರೋಡ್‌ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು
ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ವಿಜಯಪುರದ ಮನಗೂಳಿ ರಿಂಗ್‌ರೋಡ್‌ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು   

ವಿಜಯಪುರ: ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ, ತೈಲ ಬೆಲೆ ಏರಿಕೆ ಖಂಡಿಸಿ ಶನಿವಾರ ಬಿಜೆಪಿ ವತಿಯಿಂದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಮನಗೂಳಿ ರಿಂಗ್‌ರೋಡ್ ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಹೆದ್ದಾರಿ ತಡೆದು ಜನರಿಗೆ ಬೆಲೆ ಏರಿಕೆ ಬರೆ ಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ತೈಲ ಬೆಲೆ ಏರಿಸಿ ಲೂಟಿಗೆ ಇಳಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಘೋಷಣೆ ಕೂಗಿದರು. ನಂತರ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರ ಜನನ-ಮರಣ ಪ್ರಮಾಣ ಪತ್ರದ ಮೊತ್ತ ಹೆಚ್ಚಿಗೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಬ್ರಿಟಿಷರು ಉಪ್ಪಿನ ಮೇಲೆ ತೆರಿಗೆ ಹಾಕಿದಂತೆ, ಇಂದಿನ ಕಾಂಗ್ರೆಸ್ ಆಡಳಿತ ಅದೆ ಮಾಡುತ್ತಿದೆ. ತೈಲ ಬೆಲೆ ಏರಿಕೆಯಿಂದ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಲಿವೆ. ಈ ರೀತಿ ಬೆಲೆ ಏರಿಕೆ ಮೂಲಕ ಸರ್ಕಾರ ಹಗಲು ದರೋಡೆ ನಡೆಸಿದೆ. ಇದರಿಂದ ಜನಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ. ಕೂಡಲೇ ಇಂಧನ ದರ ಏರಿಕೆ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿದರು.

ADVERTISEMENT

ತಮ್ಮ ಸ್ವಾರ್ಥಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳು ಸಂಪೂರ್ಣ ವಿಫಲವಾಗಿದೆ. ಅಕ್ಕಿ ಬದಲಾಗಿ ಸರಿಯಾಗಿ ಹಣ ನೀಡುತ್ತಿಲ್ಲ. ಬಸ್‌ಗಳಲ್ಲಿ ಪ್ರತಿದಿನ ಸೀಟ್‌ಗಾಗಿ ಹೊಡೆದಾಟ ಸಾಮಾನ್ಯವಾಗಿದೆ. ಇದರಿಂದ ಸಿದ್ದರಾಮಯ್ಯನವರ ಅರ್ಥಶಾಸ್ತ್ರ ಸಂಪೂರ್ಣ ವಿಫಲವಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ ಎಂದರು.

ರಾಜ್ಯದ ಖಜಾನೆ ಖಾಲಿಗೆ ಆಗಿದ್ದು, ಗ್ಯಾರಂಟಿಗಳನ್ನು ಏಕಾಏಕಿ ತೆಗೆದು ಹಾಕಿದರೆ ಎಲ್ಲಾ ಜನ ಛೀಮಾರಿ ಹಾಕುತ್ತಾರೆ ಎಂಬ ಭಯ ಕಾಡುತ್ತಿದೆ. ಹೀಗಾಗಿ ಮುಂದುವರೆಸುವ ನಾಟಕ ನಡೆಸಿದ್ದು, ಅಭಿವೃದ್ಧಿ ಮಾತ್ರ ಶೂನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಮಂತ್ರಿಯ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಮಂತ್ರಿಗಳು ಸೇರಿ ಕೋಟ್ಯಂತರ ಬೆಲೆ ಬಾಳುವ 13 ಎಕರೆ ಸರ್ಕಾರಿ ಭೂಮಿಯನ್ನು ಕೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದಾರೆ. ಭಾಗಿಯಾದ ಅಧಿಕಾರಿಗಳನ್ನು ಅಮಾನತುಗೊಳಿಸಲು ವರದಿ ನೀಡಿದರೂ ಸಹ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದರೆ, ಅದಕ್ಕೆ ನೇರ ಹೊಣೆ ಮುಖ್ಯಮಂತ್ರಿಗಳು ಆಗುತ್ತಾರೆ. ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು. ರಾಜ್ಯದ ಸಕ್ಕರೆ ಮಂತ್ರಿ ಸೇರಿ, ಕಾಂಗ್ರೆಸ್‍ನ ಮಂತ್ರಿಗಳು ಅಕ್ರಮ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಎಸ್.ಸಿ, ಎಸ್.ಟಿ ಸಮುದಾಯದ ₹29 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿಗೆ ಹಾಕಿದರು. ಇದರಿಂದ ಆ ಸಮುದಾಯದ ಯೋಜನೆಗಳು ಬಂದಾಗಿವೆ. ವಾಲ್ಮೀಕಿ ನಿಗಮದ ₹187 ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ. ಇಂತವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಆಗುತ್ತೆಂದು ಹೇಳುತ್ತಾರೆ. ನಾವು ಸಂವಿಧಾನ ಬದಲಾಯಿಸಲು ಬಂದಿಲ್ಲ, ಸೂರ್ಯ ಚಂದ್ರ ಇರುವವರೆಗೂ ಡಾ.ಅಂಬೇಡ್ಕರ್ ಬರದಿರುವ ಸಂವಿಧಾನ ಇರಲಿದೆ ಎಂದರು.

ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಶಂಕರ ಹೂಗಾರ, ಪ್ರಕಾಶ ಚವ್ಹಾಣ, ಎಂ.ಎಸ್.ಕರಡಿ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ರಾಜಶೇಖರ ಕುರಿಯವರ, ಮಲ್ಲಿಕಾರ್ಜುನ ಗಡಗಿ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಜವಾಹಾರ ಗೋಸಾವಿ, ಸ್ವಪ್ನಾ ಕಣಮುಚನಾಳ, ರಾಜೇಶ ದೇವಗಿರಿ ಪಾಂಡುಸಾಹುಕಾರ ದೊಡಮನಿ, ವಿಕ್ರಮ ಗಾಯಕವಾಡ, ಮಡಿವಾಳ ಯಾಳವಾರ, ಅಶೋಕ ಬೆಲ್ಲದ, ರಾಜಶೇಖರ ಭಜಂತ್ರಿ ಇದ್ದರು.

ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ತೈಲ ಬೆಲೆ ಏರಿಕೆ ಮಾಡಿ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಸದಾ ಒಂದಿಲ್ಲೊಂದರ ದರ ಏರಿಕೆ ಮಾಡಿ ಲೂಟಿಗೆ ಇಳಿದಿದೆ.
ಆರ್‌.ಎಸ್.ಪಾಟೀಲ ಕೂಚಬಾಳ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ  

ವಕ್ಫ ಆಸ್ತಿ; ಪ್ರಧಾನಿಗೆ ಪತ್ರ

ನೆಹರು ಈ ದೇಶಕ್ಕೆ ಮಾಡಿರುವ ಬಹುದೊಡ್ಡ ಮೋಸವೆಂದರೆ ವಕ್ಫ ಬೋರ್ಡ್‌ ನಿರ್ಮಾಣ ಸದ್ಯ ದೇಶದಲ್ಲಿ ಸುಮಾರು 12 ಲಕ್ಷ ಎಕರೆ ಭೂಮಿಯನ್ನು ವಕ್ಪ ಆಸ್ತಿ ಮಾಡಿದೆ. ಇಂಡಿಯನ್ ಆರ್ಮಿ ರೈಲ್ವೆ ಇಲಾಖೆ ನಂತರ ಅತೀ ಹೆಚ್ಚು ಆಸ್ತಿ ವಕ್ಪಬೋರ್ಡ್‌ದ್ದಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು ನಿಮ್ಮೆಲ್ಲರ ಆಸ್ತಿ ವಕ್ಪ ನನ್ನದು ಅಂದರೆ ನ್ಯಾಯಾಲಯಕ್ಕೆ ಹೋಗಲು ಅವಕಾಶವಿಲ್ಲ. ವಕ್ಪ ಕೋರ್ಟಗೆ ಹೋಗಬೇಕು. ಅಲ್ಲಿ ಎಲ್ಲರೂ ಸಾಬರೇ ಇರುತ್ತಾರೆ. ದೇಶದಲ್ಲಿ ವಕ್ಪ ಆಸ್ತಿಯನ್ನು ಮರಳಿ ಸರ್ಕಾರಕ್ಕೆ ಪಡೆದು ದಲಿತರು ಹಿಂದುಳಿದವರಿಗೆ ಮನೆ ನಿರ್ಮಿಸಿಕೊಡಲು ಪ್ರಧಾನಮಂತ್ರಿಗಳಿಗೆ ನಾನು ಪತ್ರ ಬರೆಯುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.