ಸಿಂದಗಿ: ಪಟ್ಟಣದ ಕಿತ್ತೂರು ವೀರರಾಣಿ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ವೀರರಾಣಿ ಚನ್ನಮ್ಮನ ನೂತನ ಪುತ್ಥಳಿ ಹಾಗೂ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿ ಮರು ಅನಾವರಣಗೊಳಿಸಲಾಯಿತು.
ಇಲ್ಲಿಯ ಕನಕದಾಸ ವೃತ್ತದಿಂದ ಪುತ್ಥಳಿಗಳ ಮೆರವಣಿಗೆ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿ ಬಂದವು.
ಮೆರವಣಿಗೆಯಲ್ಲಿ ರೂಪಕಗಳು, ಕುದುರೆ ಕುಣಿತ ವಿಶೇಷವಾಗಿದ್ದವು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ, ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಊರನಹಿರಿಯಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಆಸಂಗಿಹಾಳ ಮಹಾರಾಜರ ಸಮ್ಮುಖದಲ್ಲಿ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಿತು.
ಕಿತ್ತೂರು ವೀರರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಸಮಾರಂಭದಲ್ಲಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಈಗ ಔಪಚಾರಿಕವಾಗಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಪುತ್ಥಳಿಗಳನ್ನು ಅನಾವರಣಗೊಳಿಸಲಾಗಿದ್ದು, ಆದಷ್ಟು ಶೀಘ್ರದಲ್ಲಿಯೇ ವಿವಿಧ ಸ್ವಾಮೀಜಿಗಳ ಸಾನ್ನಿಧ್ಯ ಹಾಗೂ ರಾಜಕಾರಣಿಗಳ ಸಮ್ಮುಖದಲ್ಲಿ ಟಿಪ್ಪು ಸುಲ್ತಾನ ವೃತ್ತ, ಕಿತ್ತೂರು ವೀರರಾಣಿ ಚನ್ನಮ್ಮ ವೃತ್ತ ಹಾಗೂ ಸ್ವಾಮಿ ವಿವೇಕಾನಂದ ವೃತ್ತದಲ್ಲಿನ ಪುತ್ಥಳಿಗಳ ಅನಾವರಣ ಸಮಾರಂಭವನ್ನು ಒಂದೇ ವೇದಿಕೆಯಲ್ಲಿ ವಿದ್ಯುಕ್ತವಾಗಿ ಅದ್ದೂರಿಯಾಗಿ ನೆರವೇರಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.