ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆ ವರೆಗೆ ಉತ್ತಮ ಮಳೆಯಾಗಿದೆ.
ರೋಣಿ ಮಳೆಯ ಆರ್ಭಟಕ್ಕೆ ಡೋಣಿ ನದಿ ಸೇರಿದಂತೆ ಹಳ್ಳ, ಕೊಳ್ಳಗಳು ಉಕ್ಕಿ ಹರಿದಿವೆ. ಹದ ಮಳೆಯಾಗಿರುವುದರಿಂದ ಮುಂಗಾರು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.
ಜಿಲ್ಲೆಯ ಹರನಾಳದಲ್ಲಿ 12.2 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಹಿರೂರ 10.01, ಕಣಕಾಲ 9.9, ಬರಟಗಿ 9.2, ಡೋಣೂರ 8.9, ರಾಂಪುರ 8.7,ಅರಕೇರಿ 8.6, ಬಿದರಕುಂದಿ 8.5, ನಿಂಬಾಳ ಕೆ.ಡಿ 8.3, ಕವಡಿಮಟ್ಟಿ 8.3, ನಾದ ಕೆ.ಡಿ 8 ಸೆಂ.ಮೀ ಮಳೆಯಾಗಿದೆ.
ಭಾನುವಾರ ರಾತ್ರಿ 12.30ಕ್ಕೆ ಸಿಡಿಲು ಬಡಿದು ಇಂಡಿ ತಾಲ್ಲೂಕಿನ ಮಸಳಿ ಬಿ.ಕೆ ಗ್ರಾಮದ ಶಿವಯೋಗಿ ಹೊಸಮನಿ ಅವರ ಆಕಳು ಸಾವಿಗೀಡಾಗಿದೆ.
ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ಭಾನುವಾರ ರಾತ್ರಿ 1ಕ್ಕೆ ಬಾರಿ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಬಸ್ ನಿಲ್ದಾಣ ಹತ್ತಿರ ಇರುವ ಮನೆಗಳಿಗೆ ನೀರು ನುಗ್ಗಿ ಜೋಳ, ಗೋಧಿ, ತರಕಾರಿ ದಿನ ಬಳಕೆ ವಸ್ತುಗಳು ಅಪಾರ ಪ್ರಮಾಣದಲ್ಲಿ ಹಾಳಾಗಿದೆ.
ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಮಲ್ಲನಗೌಡ ಬಿರಾದಾರ, ಢವಳಗಿ ಗ್ರಾಮದ ಭೀಮಪ್ಪ ಮಾದರ ಹಾಗೂ ಗುರುಲಿಂಗಪ್ಪ ಮೂಲಿಮನಿ, ಚೊಂಡಿ ಗ್ರಾಮದ ಯಂಕವ್ವ ಪಾಟೀಲ ಎಂಬುವವರ ಮನೆಗಳು ಭಾಗಶಃ ಹಾನಿಯಾಗಿವೆ.
ತಾಳಿಕೋಟೆ ತಾಲ್ಲೂಕಿನ ಮೂಕಿಹಾಳ ಬಳಿಯ ಸೋಗಲಿ ಹಳ್ಳವು ಮಳೆಯಿಂದ ತುಂಬಿ ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ.
ತಾಳಿಕೋಟೆ ಹತ್ತಿರ ಹರಿಯುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಟೀಷ್ ಕಾಲದ ಸೇತುವೆ ಪ್ರವಾಹದಿಂದ ಸೋಮವಾರ ಬೆಳಿಗ್ಗೆ ಮುಳುಗುವ ಹಂತ ತಲುಪಿತ್ತು.
ನಿಡಗುಂದಿ ತಾಲ್ಲೂಕಿನ ಕಿರಿಶ್ಯಾಳ ಶಾಲೆಯ ಆವರಣದಲ್ಲಿ ಭಾನುವಾರ ತಡರಾತ್ರಿ ಸುರಿದ ಮಳೆಯಿಂದ ನೀರು ನಿಂತ ಪರಿಣಾಮ ಮಕ್ಕಳ ಆಟೋಟಕ್ಕೆ ಅಡಚಣೆಯಾಯಿತು.
ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಹುಲಗಬಾಳ ತಾಂಡಾದ ಸೇತುವೆ ಭಾನುವಾರ ಸುರಿದ ಮಳೆಯಿಂದ ಕೊಚ್ಚಿ ಹೋಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.