ಹೊರ್ತಿ: ‘ಹೊರ್ತಿ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ಮಹತ್ವಕಾಂಕ್ಷಿ ಯೋಜನೆಯಾಗಿದ್ದು,ಇಂಡಿ, ನಾಗಠಾಣ ಮತಕ್ಷೇತ್ರದ ರೈತರ ಪಾಲಿನ ವರದಾನವಾಗಿದೆ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸಮೀಪದ ಅಗಸನಾಳ ಹತ್ತಿರ ಕೆರೆ ತುಂಬುವ ಯೋಜನೆಯ ಜಾಕವೇಲ್ ಹಾಗೂ ನೀರಾವರಿ ಯೋಜನೆ ನೀಲನಕ್ಷೆಯನ್ನು ಅಧಿಕಾರಿಗಳ ಜತೆ ಬುಧವಾರ ವೀಕ್ಷಿಸಿ, ಕಾಮಗಾರಿಯ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಹೊರ್ತಿಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
‘ಇಂಡಿ ಮತಕ್ಷೇತ್ರದ 32 ಹಳ್ಳಿಗಳ 21,500 ಹೆಕ್ಟೇರ್ ಪ್ರದೇಶಕ್ಕೆ ಹಾಗೂ ನಾಗಠಾಣ ಮತಕ್ಷೇತ್ರದ 10 ಹಳ್ಳಿಗಳ 6,500 ಹೆಕ್ಟೇರ್ ಪ್ರದೇಶಗಳಿಗೆ ಈ ಯೋಜನೆಯಿಂದ ಅನುಕೂಲವಾಗುವಾಗಲಿದ್ದು, ತ್ವರಿತವಾಗಿ ಮುಗಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಈ ಯೋಜನೆ ಕುರಿತು ಸಮಸ್ಯೆಗಳು ಇದ್ದರೆ ಗಮನಕ್ಕೆ ತನ್ನಿ. ತಾಂತ್ರಿಕ ತೊಂದರೆ ಇದ್ದರೆ ಸರ್ಕಾರದ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ’ ಎಂದರು.
ಕೃಷ್ಣಾ ಭಾಗ್ಯ ಜಲನಿಗಮ ಎಂ.ಡಿ ಜಯರಾಮ, ಎಚ್.ಎಂ.ಶ್ರೀನಿವಾಸ, ಕೆ.ಬಿ.ಜೆ.ಎನ್.ಎಲ್ ಅಧಿಕಾರಿ ಗೋವಿಂದ ರಾಠೋಡ, ರಾಮಪೂರ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಎಸ್.ಆರ್ ರುದ್ರವಾಡಿ, ಕೆ.ಪಿ.ಟಿ.ಸಿ.ಎಲ್ ಅಧೀಕ್ಷಕ ಗುರುನಾಥ ಗೋಟ್ಯಾಳ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.