ದೇವರಹಿಪ್ಪರಗಿ: ‘ಇಂಗಳಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆದು ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಮಹಿಳೆಯರು ಹಾಗೂ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ ತಳಕೇರಿ ಮಾತನಾಡಿ, ‘ಅಕ್ರಮ ಮದ್ಯ ಸುಮಾರು ವರ್ಷಗಳಿಂದ ಗ್ರಾಮದ ಮನೆ, ಕಿರಾಣಿ, ಪಾನ್ ಶಾಪ್ ಅಂಗಡಿಗಳಲ್ಲಿ ನಿರ್ಭಯವಾಗಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಿಂದಗಿ ತಾಲ್ಲೂಕು ಅಬಕಾರಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕೂಡಲೇ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಶಿಸ್ತು ಕ್ರಮ ಜರುಗಿಸಿ, ಮದ್ಯ ಮಾರಾಟ ಬಂದ್ ಮಾಡಿಸಬೇಕು. ಕ್ರಮ ಕೈಗೊಳ್ಳಲು ನಿರ್ಲಕ್ಷ್ಯವಹಿಸಿ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಪ್ರಕಾಶ ಸಿಂದಗಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೇಣುಕಾ ಕಟ್ಟಿಮನಿ, ಯಲ್ಲವ್ವ ಮಾದರ, ಸಾವಿತ್ರಿ ಕಟ್ಟಿಮನಿ, ಭೀಮವ್ವ ಮಾದರ, ಮಾನಂದಾ ಕಟ್ಟಿಮನಿ, ಯಲ್ಲವ್ವ ಕನ್ನೋಳ್ಳಿ, ಸೋಮವ್ವ ರತ್ನಾಕರ, ಭಾರತಿ ಭಾವಿಮನಿ, ರುಕ್ಮವ್ವ ಕಟ್ಟಿಮನಿ, ನಂದವ್ವ ಹೊಸಮನಿ, ಚಂದ್ರವ್ವ ಭಾವಿಮನಿ, ಚಂದ್ರವ್ವ ಕನ್ನೋಳ್ಳಿ, ಅನಿತಾ ಭಾವಿಮನಿ, ರವಿ ಶಿರವಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.