ದೇವರಹಿಪ್ಪರಗಿ: ಬಿತ್ತನೆಗೆ ಮುಂಚಿತವಾಗಿ ಬೀಜಗಳಲ್ಲಿ ಬರ ನಿರೋಧಕತೆ ಹೆಚ್ಚಿಸಲು ಬೀಜೋಪಚಾರ ಅಗತ್ಯವಾಗಿದೆ ಎಂದು ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಹೇಳಿದರು.
ಪಟ್ಟಣದ ಸಾವಿತ್ರಿ ಹಿರೇಮಠ ಕೃಷಿಭೂಮಿಯಲ್ಲಿ ಶನಿವಾರ ಜರುಗಿದ ಬೀಜೋಪಚಾರ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿತ್ತನೆಗೆ ಮುಂಚೆ ಬೀಜಗಳನ್ನು ಶೇ 2ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಒಂದು ಗಂಟೆ ನೆನೆಸಿ ನಂತರ ನೆರಳಿನಲ್ಲಿ ಕನಿಷ್ಠ 7 ಗಂಟೆ ಒಣಗಿಸಬೇಕು. ನಂತರ ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ 3 ಗ್ರಾಂ ಶೀಲೀಂದ್ರ ಮಿಶ್ರಣವಾದ ಕಾರ್ಬೇಂಡೈಜಿಮ್ ಶೇ 12 ಹಾಗೂ ಮ್ಯಾಂಕೋಜೇಬ್ ಶೇ 64 ಅಥವಾ 10 ಗ್ರಾಮ್ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮ್, ಪಿಎಸ್ಬಿ ಹಾಗೂ ರೈಜೋಬಿಯಂಗಳಿಂದ ಬೀಜೋಪಚಾರ ಮಾಡಬೇಕು ಎಂದು ತಿಳಿಸಿದರು.
ಜಮೀನಿನ ಒಂದು ಎಕರೆ ಪ್ರದೇಶವನ್ನು ತೊಗರಿ ಬೆಳೆ ಪ್ರಾತ್ಯಕ್ಷಿಕೆಗಾಗಿ ಆಯ್ಕೆ ಮಾಡಲಾಯಿತು. ನಿವೃತ್ತ ತಾಲ್ಲೂಕು ಪಂಚಾಯಿತಿ ಎಡಿ ಪ್ರಭುದೇವ ಹಿರೇಮಠ, ಸಿಂದಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೆಗೋಳ, ಕೃಷಿ ಅಧಿಕಾರಿ ಎಚ್.ಕೆ.ಪಾಟೀಲ, ಸಹಾಯಕ ಕೃಷಿ ಅಧಿಕಾರಿ ರಾಜು ಸದಾನಂದ, ಆತ್ಮಾ ಸಿಬ್ಬಂದಿ ಸುಧಾಕರ್ ಇರಸೂರ, ಪಂಚಾಯಿತಿಗಳ ಕೃಷಿಸಖಿಯರು, ತಾಂತ್ರಿಕ ಉತ್ತೇಜಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.