ADVERTISEMENT

ವಿಜಯಪುರ: ₹16.87 ಲಕ್ಷ ಮೌಲ್ಯದ ಚಿನ್ನಾಭರಣ ವಶ

ನಗರದ ವಿವಿಧೆಡೆ ಈಚೆಗೆ ನಡೆದಿದ್ದ ಮನೆಗಳ್ಳತನ, ಬೈಕ್‌ ಕಳವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 14:11 IST
Last Updated 24 ಜನವರಿ 2024, 14:11 IST
ವಿಜಯಪುರ ನಗರದ ವಿವಿಧೆಡೆ ನಡೆದ ಮನೆಗಳ ಕಳವು ಪ್ರಕರಣದಲ್ಲಿ ಬಂಧಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಬಂಗಾರದ ಆಭರಣ, ಟಿವಿಯೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮತ್ತು  ಸಿಬ್ಬಂದಿ
ವಿಜಯಪುರ ನಗರದ ವಿವಿಧೆಡೆ ನಡೆದ ಮನೆಗಳ ಕಳವು ಪ್ರಕರಣದಲ್ಲಿ ಬಂಧಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಬಂಗಾರದ ಆಭರಣ, ಟಿವಿಯೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮತ್ತು  ಸಿಬ್ಬಂದಿ   

ವಿಜಯಪುರ: ನಗರದ ವಿವಿಧೆಡೆ ಇತ್ತೀಚೆಗೆ ನಡೆದ ಮನೆಗಳ್ಳತನ ಹಾಗೂ ಬಂಗಾರದ ಅಂಗಡಿ ಮತ್ತು ಬೈಕ್‌ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಜನರನ್ನು ಗಾಂಧಿಚೌಕಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಗಾಂಧಿಚೌಕಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತ ಕಳ್ಳರಿಂದ ₹16.87 ಲಕ್ಷ ಮೌಲ್ಯದ 275 ಗ್ರಾಂ ಬಂಗಾರದ ಆಭರಣ ಹಾಗೂ ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗಾಂಧಿಚೌಕಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಮನೆ ಮತ್ತು ಜಲ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಂದು ಮನೆ ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿಂದ 210 ಗ್ರಾಂ ತೂಕದ ಬಂಗಾರದ ಆಭರಣ, 20 ಗ್ರಾಂ ಬೆಳ್ಳಿಯ ಕಾಯಿನ್‌, ಒಂದು ಎಲ್‌ಇಡಿ ಟಿವಿ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

ನಗರದ ಬಬಲೇಶ್ವರ ನಾಕಾದ ಬಳಿ ಇರುವ ಅಲಿಖಾನ್‌ ಮಸೀದಿ ಹಿಂದಿನ ನಿವಾಸಿ ಸೆಂಟ್ರಿಂಗ್‌ ಕೆಲಸಗಾರ ಜಮೀರ್‌ ಖಾನ್‌ (9 ಕಳವು ಪ್ರಕರಣದಲ್ಲಿ ಭಾಗಿ), ಸೈನಿಕ ಶಾಲೆ ಎದುರಿನ ಶಾಸ್ತ್ರೀ ನಗರದ ನಿವಾಸಿ ಗಿಲಾವ್‌ ಕೆಲಸ ಮಾಡುವ ಅನ್ವರ್‌ ಶೇಖ್‌(10 ಪ್ರಕರಣ), ಅಥಣಿಯ ಗದ್ಯಾಳ ಗಲ್ಲಿಯ ನಿವಾಸಿ ಗಿಲಾವ್‌ ಕೆಲಸಗಾರ ಆಸೀಫ್‌ ಹವಾಲ್ದಾರ(6 ಪ್ರಕರಣ) ಹಾಗೂ ವಿಜಯಪುರ ಶಾಸ್ತ್ರೀ ನಗರದ ನಿವಾಸಿ ಚಾಲಕ ಸಲ್ಮಾನ್‌ ಖಾನ್‌(24 ಪ್ರಕರಣ) ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

50 ಗ್ರಾಂ ಚಿನ್ನಾಭಣ ವಶ:

ಗಾಂಧಿ ಚೌಕಿ ‍ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಝಂಡಾ ಕಟ್ಟೆ ಹಳಕೇರಿ ಗಲ್ಲಿಯ ನಿವಾಸಿ ಸಮೀರ್ ಇನಾಂದಾರ ಎಂಬಾತನನ್ನು ಬಂಧಿಸಿ, 50 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ.

ಕಳ್ಳಿಯ ಬಂಧನ:

ವಿಜಯಪುರ ನಗರದ ಸದ್ಗುರು ಜ್ಯುವೆಲರಿ ಅಂಗಡಿಯಲ್ಲಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲಾಪುರ ಜಿಲ್ಲೆ ಅಕ್ಕಲಕೋಟೆ ತಾಲ್ಲೂಕಿನ ಬ್ಯಾಗಳಿಯ ಲಲಿತಾ ಗಾಯಕವಾಡ ಎಂಬಾಕೆಯನ್ನು ಬಂಧಿಸಿ ₹80 ಸಾವಿರ ಮೌಲ್ಯದ 15 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ.

ಬೈಕ್‌ ಕಳ್ಳರು ಬಲೆಗೆ:

ನಗರದ ವಿವಿಧೆಡೆ ನಿಲ್ಲಿಸಿದ್ದ ಮೂರು ಬೈಕುಗಳನ್ನು ಕಳ್ಳತನ ಮಾಡಿದ್ದ ಆಸಾರ ಗಲ್ಲಿಯ ಸಾಬೀರ ಬಗಲಿ ಮತ್ತು ಇರಾನಿ ಕಾಲೊನಿಯ ಗೌಸ್‌ ಮೊಯ್ದಿನ್‌ ಮಕಾನದಾರ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.