ದೇವರಹಿಪ್ಪರಗಿ: ಬಸ್ ನಿಲ್ದಾಣ ಕಾಂಪೌಂಡಿಗೆ ಹೊಂದಿಕೊಂಡಿದ್ದ ಕೊಳಚೆ ಗುಂಡಿಯನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಜಾಗೆಯ ಮಾಲೀಕ ಸಮ್ಮುಖದಲ್ಲಿ ಮಲೀನ ನೀರು ಹಾಗೂ ತ್ಯಾಜ್ಯ ತೆರವುಗೊಳಿಸಿದರು.
ಪಟ್ಟಣದ ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಭಾನುವಾರ ‘ಕೊಳಚೆಗುಂಡಿ ಜಾಗ ಮುಚ್ಚಲು ಆಗ್ರಹ’ ಎಂಬ ಶೀರ್ಷಿಕೆಯೊಂದಿಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಸುದ್ದಿ ಹಾಗೂ ಸಮಸ್ಯೆಗೆ ಸ್ಪಂದಿಸಿದ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಕೂಡಲೇ ಕಾರ್ಯಪ್ರವೃತ್ತರಾಗಿ ಜಾಗೆಯ ಮಾಲೀಕರಿಗೆ ನಿರ್ದೇಶನ ನೀಡಿದ ಪರಿಣಾಮ ಜಾಗೆಯ ಮಾಲೀಕರು ಭಾನುವಾರ ಮಲೀನ ನೀರನ್ನು ತೆರವುಗೊಳಿಸಿದರು. ನಂತರ ಪಟ್ಟಣ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿ ಜೆಸಿಬಿಯೊಂದಿಗೆ ಆಗಮಿಸಿ ಗುಂಡಿಯಲ್ಲಿ ತುಂಬಿದ್ದ ತ್ಯಾಜ್ಯವನ್ನು ಬೇರೆಡೆ ಸಾಗಿಸಿದರು.
ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ತಕ್ಷಣವೇ ಕಾರ್ಯ ನೆರವೇರಿಸಿದ ಮುಖ್ಯಾಧಿಕಾರಿ, ಜಾಗೆಯ ಮಾಲೀಕ ಹಾಗೂ ಪಟ್ಟಣ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿಗೆ ಸ್ಥಳೀಯ ಅಂಗಡಿ ಮಾಲೀಕರು ಹಾಗೂ ಎಲ್ಲ ವ್ಯಾಪಾರಸ್ಥರು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.