ಆಲಮೇಲ: ಪಟ್ಟಣದ ನಿತ್ಯಾನಂದ ಆರೂಢಮಠದ ಪೀಠಾಧಿಪತಿ ಶರಣಬಸವ ಶರಣರು ಬಳುಂಡಗಿ (73) ಶನಿವಾರ ಮಧ್ಯಾಹ್ನ ಲಿಂಗೈಕ್ಯರಾದರು.
ಶ್ರೀಗಳು ಪಟ್ಟಣದಲ್ಲಿ 1980ರಲ್ಲಿ ಆರೂಢ ಸಂಗನಬಸವ ಶರಣರಿಂದ ಧೀಕ್ಷೆ ಪಡೆದುಕೊಂಡು ನಿತ್ಯಾನಂದ ಆರೂಢಮಠವನ್ನು ಸ್ಥಾಪಿಸಿದ್ದರು. ರಾಮಪುರ ಸಂಗನ ಬಸವ ಶರಣರ ಆರೂಢ ಪರಂಪರೆಯ ಶಾಖಾಮಠ ಇದಾಗಿದ್ದು, ಕಳೆದ 44 ವರ್ಷಗಳಿಂದಲೂ ಮಠವನ್ನು ಮುನ್ನಡೆಸಿದ್ದ ಶರಣರು ಭಕ್ತರಿಗೆ ಹತ್ತಾರು ಸಮಾಜೋಪಯೋಗಿ ಕಾರ್ಯಗಳನ್ನು ಮಾಡಿದ್ದರು. ಪ್ರತಿವರ್ಷ ಸಾಮೂಹಿಕ ವಿವಾಹ ನಡೆಸಿಕೊಂಡು ಬಂದಿದ್ದರು.
ಶ್ರೀಮಠದಲ್ಲಿ ದಾಸೋಹ, ಜಾತ್ರೆ, ರಥೋತ್ಸವ ಕಾರ್ಯಕ್ರಮಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬಂದಿದ್ದರು. ಸಮಾಜಮುಖಿ ಕಾರ್ಯಗಳಿಂದ ಎಲ್ಲರ ಪ್ರೀತಿಗೆ ಶರಣರು ಪಾತ್ರಾಗಿದ್ದರು. ಮೊದಲ ಪೀಠಾಧಿಪತಿಯೂ ಆಗಿದ್ದ ಶರಣರು ಕಳೆದ ಎರಡು ವರ್ಷಗಳ ಹಿಂದೆ ಮಠದ ಉತ್ತರಾಧಿಕಾರಿಯಾಗಿ ಬಸವಲಿಂಗ ಶರಣರನ್ನು ನೇಮಿಸಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ್ದರು.
ಅಂತ್ಯಕ್ರಿಯೆ: ಭಾನುವಾರ ಬೆಳಿಗ್ಗೆ 12.30 ಗಂಟೆಗೆ ಶ್ರೀಗಳ ಅಂತ್ಯಸಂಸ್ಕಾರ ಮಠದ ಆವರಣದಲ್ಲಿ ನಡೆಯಲಿದೆ ಎಂದು ಶ್ರೀಮಠದ ಬಸವಲಿಂಗ ಶರಣರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.