ಸಿಂದಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕೆಲಸಕ್ಕೆ ಪೂರಕವಾದ ಸ್ಮಾರ್ಟ್ಫೋನ್, ಸಮವಸ್ತ್ರ ಹಾಗೂ ಔಷಧಿಗಳ ಕಿಟ್ನ್ನು ಶಾಸಕ ಅಶೋಕ ಮನಗೂಳಿ ವಿತರಿಸಿದರು.
ಇಲ್ಲಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಡಿಮೆ ಗೌರವಧನದಲ್ಲಿ ಅಪಾರ ಶ್ರಮವಹಿಸುತ್ತಾರೆ. ಇಲಾಖೆಯ ಫಲಾನುವಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿಯೂ ಶ್ರಮಿಸುತ್ತಿದ್ಧಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಕೆ.ಚವ್ಹಾಣ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಗೃಹಲಕ್ಷ್ಮಿ ಯೋಜನೆ, ಮಾತೃಪೂರ್ಣ, ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ ಇಲಾಖೆಯ ಯೋಜನೆಗಳ ಕುರಿತು ವಿವರಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇಲಾಖೆಯ ಯೋಜನೆಗಳನ್ನು ಮನೆ, ಮನೆಗೆ, ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಸಿಂದಗಿ ಪಟ್ಟಣದ ಐದು ಕುಟುಂಬಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ವಿತರಣೆ , ಹೆಣ್ಣು ಮಕ್ಕಳ ಲಿಂಗಾನುಪಾತ, ಸಾಕ್ಷರತೆ ಹೆಚ್ಚಿಸುವ ಅಂಗವಾಗಿ ಜಾರಿಗೆ ಬಂದಿರುವ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಅರಿವು ಮೂಡಿಸುವ ಸ್ಟಿಕರ್ಗಳನ್ನು ಶಾಸಕ ಮನಗೂಳಿ ಬಿಡುಗಡೆಗೊಳಿಸಿದರು.
ಜಯಶ್ರೀ ದೊಡಮನಿ, ಮೇಲ್ವಿಚಾರಕಿಯರಾದ ಪೂರ್ಣಿಮಾ ಸುಬೇದಾರ, ಶೈಲಶ್ರೀ ಪಾಟೀಲ ಮಾತನಾಡಿದರು. ಸರಸ್ವತಿ ಮಠ, ಪ್ರತಿಭಾ ಕುರಡೆ ಹಾಗೂ ಮೇಲ್ವಿಚಾರಕಿಯರು, ಆಲಮೇಲ ಸಿಂದಗಿ ತಾಲ್ಲೂಕುಗಳ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.