ವಿಜಯಪುರ: ವಿಜಯಪುರ ತಾಲ್ಲೂಕಿನ ಬೊಮ್ಮನಹಳ್ಳಿ, ಜಂಬಗಿ, ಹುಣಸ್ಯಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಏಕಾಏಕಿ ಬಿರುಗಾಳಿ, ಗುಡುಗು, ಸಿಡಿಲಿನೊಂದಿಗೆ ಸುರಿದ ಮಳೆಗೆ ಬಾಳೆ, ಲಿಂಬೆ ತೋಟಕ್ಕೆ ಅಪಾರ ಹಾನಿಯಾಗಿದೆ.
ಬೊಮ್ಮನಳ್ಳಿ ಗ್ರಾಮದ ರೈತ ಮುರುಗೆಪ್ಪ ಚೌಗಲೆ ಅವರ ಸುಮಾರು ಒಂದೂವರೆ ಎಕರೆ ತೋಟದಲ್ಲಿ ಬೆಳೆಯಲಾಗಿದ್ದ 1,800 ಬಾಳೆಗಿಡಗಳು ನೆಲಕ್ಕುರುಳಿವೆ. ಅಲ್ಲದೇ, ಹೊಲದಲ್ಲಿ ಹಾದುಹೋಗಿರುವ ವಿದ್ಯುತ್ ಕಂಬ, ತಂತಿಗಳು ಮುರಿದುಬಿದ್ದಿವೆ.
‘ಬಾಳೆಕಾಯಿಗಳು ಕಟಾವು ಹಂತಕ್ಕೆ ಬಂದಿತ್ತು. ಉತ್ತಮ ಫಸಲು–ಆದಾಯದ ನಿರೀಕ್ಷೆ ಇತ್ತು. ಈ ವೇಳೆ ಗಾಳಿ–ಮಳೆಗೆ ಬೆಳೆ ಸಂಪೂರ್ಣ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಮುರುಗೆಪ್ಪ ಆಗ್ರಹಿಸಿದರು.
ವಿಜಯಪುರ ತಾಲ್ಲೂಕಿನ ಜಂಬಗಿ, ಹುಣಸ್ಯಾಳ ಗ್ರಾಮದಲ್ಲಿ ಗಾಳಿ–ಮಳೆಗೆ, ರೈತರಾದ ಸಂಗಮೇಶ ಮುದಗಿ ಮತ್ತು ಕಾಂತಪ್ಪ ಹಳ್ಳಿ ಅವರಿಗೆ ಸೇರಿದ ಸುಮಾರು 60ಕ್ಕೂ ಅಧಿಕ ಲಿಂಬೆ ಗಿಡಗಳು ಬಿಡಸಮೇತ ಉರುಳಿಬಿದ್ದು, ಹಾನಿಯಾಗಿವೆ. ಗುಣಕಿ ಗ್ರಾಮದ ನಾನಾಗೌಡ ಸಿದ್ಧಪ್ಪ ಬಿರಾದಾರ ಅವರ ಎರಡು ಎತ್ತುಗಳಿಗೆ ಸಿಡಿಲು ಬಡಿದು, ಸಾವಿಗೀಡಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.