ADVERTISEMENT

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ; ಯತ್ನಾಳ ಆರೋ‍ಪ

ತೊರವಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:28 IST
Last Updated 23 ಜೂನ್ 2024, 15:28 IST
ವಿಜಯಪುರ ನಗರದ ಹೊರವಲಯದಲ್ಲಿರುವ ತೊರವಿ ಗ್ರಾಮದಲ್ಲಿ ಭಾನುವಾರ ₹5ಕೋಟಿ ಅನುದಾನದ ರಸ್ತೆ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ ನೆರವೇರಿಸಿದರು
ವಿಜಯಪುರ ನಗರದ ಹೊರವಲಯದಲ್ಲಿರುವ ತೊರವಿ ಗ್ರಾಮದಲ್ಲಿ ಭಾನುವಾರ ₹5ಕೋಟಿ ಅನುದಾನದ ರಸ್ತೆ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ ನೆರವೇರಿಸಿದರು   

ವಿಜಯಪುರ: ಗ್ಯಾರಂಟಿ, ಗ್ಯಾರಂಟಿ ಎನ್ನುತ್ತಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯೇ ಮುಗಿದಿದೆ. ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಹೊರವಲಯದಲ್ಲಿರುವ ತೊರವಿ ಗ್ರಾಮದ ಗಣಪತಿ ಗುಡಿ ಹತ್ತಿರ ಭಾನುವಾರ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಮಂಜೂರಾದ ₹5 ಕೋಟಿ ಅನುದಾನದಲ್ಲಿ ಅಥಣಿ ಮುಖ್ಯ ರಸ್ತೆಯಿಂದ ಡಯಟ್ ಕಾಲೇಜಿನ ವರೆಗೆ ಹಾಗೂ ಆಂತರಿಕ ರಸ್ತೆಗಳ ಸುಧಾರಣೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರವಿದ್ದಾಗ ದಿನಕ್ಕೆ ಎರಡ್ಮೂರು ಕೋಟಿ ಮೊತ್ತದ ಕಾಮಗಾರಿಗಳ ಭೂಮಿಪೂಜೆ ನಡೆಯುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷದ ಮೇಲೆ ಈಗ ₹5 ಕೋಟಿ ಭೂಮಿಪೂಜೆ ನಡೆಯುತ್ತಿದೆ. ನನಗೆ ಅನುದಾನ ತರುವುದು ಗೊತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗಿದ್ದು, ಉಳಿದ ಅಲ್ಪಸ್ವಲ್ಪ ಕೆಲಸಗಳನ್ನು ಸಹ‌ ಮುಗಿಸುವೆ ಎಂದು ಭರವಸೆ ನೀಡಿದರು.

ADVERTISEMENT

ಈ ಹಿಂದೆ ವಿಜಯಪುರ ನಗರದಲ್ಲಿನ ದೂಳಿನಿಂದ ಅಸ್ತಮಾ ಬಾಧಿತರ ಸಂಖ್ಯೆ ಹೇರಳವಾಗಿತ್ತು. ದಿನಕ್ಕೆ ಕನಿಷ್ಟ ಎರಡ್ಮೂರು ಬಾರಿ ಬಟ್ಟೆ ಬದಲಿಸಬೇಕಿತ್ತು. ಈಗ ರಸ್ತೆಗಳ ಅಭಿವೃದ್ಧಿಯಿಂದ ಅಸ್ತಮಾ ಕಣ್ಮರೆ ಆಗಿದ್ದರೆ, ಬಟ್ಟೆಗಳನ್ನು ಎರಡ್ಮೂರು ದಿನ ಬಳಸಿದರೂ ಕೊಳಕಾಗುತ್ತಿಲ್ಲ. ಸದ್ಯ ವಿಜಯಪುರ ನಗರದ ವಾತಾವರಣ ಸಂಪೂರ್ಣ ಬದಲಾಗಿದೆ ಎಂದರು.

ಹಿಂದೂಗಳು ಜಾಗೃತರಾಗಿ ಮತ ಹಾಕಲು ಮುಂದಾಗದಿದ್ದರೇ, ನಿಷ್ಕಾಳಜಿ ಮಾಡಿದರೆ ಕೆಲವೇ ವರ್ಷಗಳಲ್ಲಿ ಭಾರತ ಪಾಕಿಸ್ತಾನ ಆಗುತ್ತೆ, 2047ಕ್ಕೆ ಇಸ್ಲಾಂ ರಾಷ್ಟ್ರವನ್ನಾಗಿಸುವ ಯತ್ನ ನಡೆಸಿದ್ದಾರೆ. ಅದಕ್ಕೆ ಅವರು ಮಳೆ, ಚಳಿ, ಬಿಸಿಲು ಇರಲಿ, ಎಷ್ಟೇ ದೂರ ಇರಲಿ 100ಕ್ಕೆ 100ರಷ್ಟು ಮತ ಹಾಕುತ್ತಾರೆ. ಹಾಗೆಯೇ, ಸನಾತನ ಧರ್ಮ ಉಳಿಯಬೇಕು ಎಂದರೆ ಮುಂಬರುವ ಪ್ರತಿಯೊಂದು ಚುನಾವಣೆಗಳಲ್ಲಿಯೂ ಹಿಂದೂಗಳು ಜಾಗೃತರಾಗಿ ಮತ ಚಲಾಯಿಸಬೇಕು ಎಂದು ಹೇಳಿದರು. 

ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ, ನಮ್ಮ‌ ಕಾಲೊನಿಗಳಲ್ಲಿ ವಿವಿಧ ಅಭಿವೃದ್ಧಿಗಾಗಿ ಶಾಸಕರು ಸಾಕಷ್ಟು ಹಣ ನೀಡುತ್ತಾರೆ. ಆ  ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಸ್ಯೆ ಆಗುವವರೆಗೂ ಬಿಟ್ಟು ಪರಿಹಾರಕ್ಕಾಗಿ ಶಾಸಕರ ಬಳಿಗೆ ಹೋಗುವ ಬದಲಾಗಿ, ನಾವುಗಳೇ ಜಾಗೃತರಾಗಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ಮುಖಂಡರಾದ ದಾದಾಸಾಹೇಬ ಬಾಗಾಯತ, ನಾಗೇಂದ್ರ ಯಾದವ ಬಸವರಾಜ ಕುಂಬಾರ, ಡಿ.ಎಂ.ಘೋರ್ಪಣೆ, ಡಿ.ಕೆ.ಸರಸಂಬಿ, ಪರಸಪ್ಪ ಕಬಾಡೆ, ಶಿವರಾಜ ಓತಿಹಾಳ, ಪಿಡಿಒ ರಾಜೇಶ್ವರಿ ತುಂಗಳ ಮತ್ತಿತರರು ಇದ್ದರು.

₹5 ಕೋಟಿ ಅನುದಾನದಲ್ಲಿ ಆಂತರಿಕ ರಸ್ತೆಗಳ ಸುಧಾರಣೆಗೆ ಭೂಮಿಪೂಜೆ 2047ಕ್ಕೆ ಇಸ್ಲಾಂ ರಾಷ್ಟ್ರವನ್ನಾಗಿಸುವ ಯತ್ನ ನಡೆಸಿದ್ದಾರೆ: ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.