ADVERTISEMENT

ಕಾಂಗ್ರೆಸ್‌ನಿಂದ ಸಮಾಜ ಒಡೆಯುವ ಕೆಲಸ: ಸಂಜಯ ಪಾಟೀಲ‌ ಕನಮಡಿ

​ಪ್ರಜಾವಾಣಿ ವಾರ್ತೆ
Published 3 ಮೇ 2024, 13:57 IST
Last Updated 3 ಮೇ 2024, 13:57 IST
ಸಂಜಯ ಪಾಟೀಲ‌ ಕನಮಡಿ
ಸಂಜಯ ಪಾಟೀಲ‌ ಕನಮಡಿ   

ವಿಜಯಪುರ: ಕಳೆದ ಅನೇಕ ವರ್ಷಗಳ ಹೋರಾಟದ ಫಲ ಪಂಚಮಸಾಲಿ ಸಮಾಜ‌ ಒಗ್ಗಟ್ಟಾಗಿದೆ. ಆದರೆ ಕಾಂಗ್ರೆಸ್‌ನವರು ನಮ್ಮ ಸಮಾಜವನ್ನು ಮತ್ತೆ ಒಡೆಯುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ‌ ಮುಖಂಡ‌ ಸಂಜಯ ಪಾಟೀಲ‌ ಕನಮಡಿ ಹೇಳಿದರು‌.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಮತಬ್ಯಾಂಕ್‌ಗಾಗಿ ಪ್ರತ್ಯೇಕವಾಗಿ ಕಾಂಗ್ರೆಸ್ ಪಂಚಮಸಾಲಿ ಸಮಾಜ ಸಮಾವೇಶ ಮಾಡಲು ಮುಂದಾಗಿದ್ದು, ಇದರಿಂದ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಪಂಚಮಸಾಲಿ ಸಮಾಜದ‌ ಹಿರಿಯರು ಕಾಂಗ್ರೆಸ್‌ನ ಒಡೆದಾಳುವ ನೀತಿಗೆ ಒಳಗಾಗಬಾರದು. ಪಕ್ಷ ಬೇರೆ ಸಮಾಜ ಬೇರೆ, ಸಮಾಜವನ್ನು ರಾಜಕಾರಣದಲ್ಲಿ ಬೆರೆಸುವ ಕೆಲಸ ಆಗಬಾರದು. ಇದರಿಂದ ಸಮಾಜಕ್ಕೆ ಕಂಟಕವಾಗಲಿದೆ ಎಂದರು.

ADVERTISEMENT

ಚುನಾವಣೆಗಳು ಅಂದಾಗ ರಾಜಕೀಯ ಪಕ್ಷಗಳು ದಾಳ ಉರುಳಿಸುತ್ತವೆ. ಕಾಂಗ್ರೆಸ್ ಪಂಚಮಸಾಲಿ ಸಮಾಜ‌ ಮುಖಂಡರು ಮೇ 4ರಂದು ಸಮಾವೇಶಕ್ಕೆ ಕರೆಕೊಟ್ಟಿದ್ದು ತಪ್ಪು. ಕಾಂಗ್ರೆಸ್ ಬೆಂಬಲಿತ ಸಮಾವೇಶ ಸಮಂಜಸವಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಮುಖಂಡ ಸುರೇಶ ಬಿರಾದಾರ ಮಾತನಾಡಿ, ಪಂಚಮಸಾಲಿ ಸಮಾಜ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿರುವ ಸ್ವಾಭಿಮಾನಿ ಸಮಾಜವಾಗಿದೆ. ಇಂಥ ಸಮಾಜ ಒಡೆಯುವ ಕೆಲಸ ಆಗಬಾರದು. ಅವರು ಗಾಣಿಗ, ಮಾದಿಗ, ರೆಡ್ಡಿ ಸೇರಿದಂತೆ ಎಲ್ಲ ಸಮಾಜ ಸಭೆ ಮಾಡುತ್ತಿದ್ದು, ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ಲೋಕಸಭೆ ಚುನಾವಣೆ ಯಾವುದೇ ಜಾತಿ ಚುನಾವಣೆಯಲ್ಲ. ಇದು ದೇಶದ ಚುನಾವಣೆಯಾಗಿದ್ದು, ದೇಶ ಭದ್ರತೆಗೆ ಬಿಜೆಪಿಗೆ‌ ಮತ ಚಲಾಯಿಸಬೇಕು. ಕಾಂಗ್ರೆಸ್‌ ಮಾಡಿದ ಹಾಗೆ ನಾವು ಸಮಾವೇಶ ಮಾಡಲ್ಲ. ನಮಗೆ ದೇಶ‌ ಉಳಿಯಬೇಕು, ದೇಶ ಉಳಿದರೆ ಧರ್ಮ ಉಳಿಯುತ್ತದೆ, ಧರ್ಮ ಉಳಿದರೆ ನಮ್ಮ ಜಾತಿಗಳು ಉಳಿಯುತ್ತದೆ ಎಂದರು.

ಜಾತಿಯಲ್ಲಿ ರಾಜಕೀಯವಾಗಿ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಖಿದೆ. ಸಮಾಜದ ಮುಖಂಡರು ಸಮಾವೇಶವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಚುನಾವಣಾ ಬಳಿಕ ಆತ್ಮಾವಲೋಕನ ಸಭೆ‌ ಮಾಡೋಣ. ಆಂದೋಲನ‌ ಮಾಡೋಣ ಎಂದರು.

ಉಮೇಶ ಕೊಳಕೂರ, ಭೀಮಾಶಂಕರ ಹದನೂರ‌, ಎಸ್.ಎ.‌ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.