ಮುದ್ದೇಬಿಹಾಳ: ತಾಲ್ಲೂಕಿನ ಕಂದಗನೂರು ಗ್ರಾಮದಲ್ಲಿ ಈಚೆಗೆ ಮನೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಂದಗನೂರು ಗ್ರಾಮದ ದೇವಮ್ಮ ದುರಗಪ್ಪ ಮಾದರ ಇವರ ಮನೆಯಲ್ಲಿ ₹61 ಸಾವಿರ ಮೌಲ್ಯದ ಚಿನ್ನಾಭರಣ, ₹80 ಸಾವಿರ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ತೀವ್ರಗೊಳಿಸಿದ್ದ ಪೊಲೀಸರು ಎಸ್.ಪಿ ಋಷಿಕೇಶ ಸೋನಾವಣೆ ಅವರು ವಿಶೇಷ ತಂಡ ರಚಿಸಿದ್ದರು.
ಅದೇ ಗ್ರಾಮದ ಶಿವಪ್ಪ ದುರಗಪ್ಪ ಮಾದರ ಬಂಧಿತರು. ವಿಚಾರಣೆ ನಡೆಸಿದಾಗ ಕಳವು ಮಾಡಿದ್ದು ಒಪ್ಪಿಕೊಂಡಿದ್ದಾರೆ. ಆತನಿಂದ ₹1.61 ಲಕ್ಷ ಮೌಲ್ಯದ ವಿವಿಧ ಚಿನ್ನಾಭರಣ, ನಗದು ಹಣ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಆರೋಪಿ ಪತ್ತೆ ಹಚ್ಚಲು ಶ್ರಮಿಸಿದ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜಯ ತಿಪರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ಆರ್.ಎಲ್.ಮನ್ನಾಭಾಯಿ, ಸಿಬ್ಬಂದಿ ಆರ್.ಎಸ್.ಪಾಟೀಲ್, ಎಸ್.ಎಲ್.ಹತ್ತರಕಿಹಾಳ, ವಿರೇಶ ಹಾಲಗಂಗಾಧರಮಠ, ಆರ್.ಎಸ್.ಮಾದರ ಅವರ ಕಾರ್ಯವನ್ನು ಶ್ಲಾಘಿಸಿ ಎಸ್ಪಿ ಅವರು ನಗದು ಬಹುಮಾನ ಘೋಷಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.