ADVERTISEMENT

ನಿಡಗುಂದಿ: ಸಿಕ್ಕ ಚಿನ್ನದ ಉಂಗುರು ಮರಳಿಸಿದ ಪಶು ಚಿಕಿತ್ಸಾಲಯದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 14:39 IST
Last Updated 24 ಜೂನ್ 2024, 14:39 IST
10 ಗ್ರಾಂ ಚಿನ್ನದ ಉಂಗುರವನ್ನು ಪಶು ವೈದ್ಯಕೀಯ ಪರೀಕ್ಷಕ ಮಲ್ಲಿಕಾರ್ಜುನಗೌಡ ಬಿರಾದಾರ ಕಾಶಿರಾಯ ದೇಸಾಯಿ ಅವರಿಗೆ ಮರಳಿಸಿದರು
10 ಗ್ರಾಂ ಚಿನ್ನದ ಉಂಗುರವನ್ನು ಪಶು ವೈದ್ಯಕೀಯ ಪರೀಕ್ಷಕ ಮಲ್ಲಿಕಾರ್ಜುನಗೌಡ ಬಿರಾದಾರ ಕಾಶಿರಾಯ ದೇಸಾಯಿ ಅವರಿಗೆ ಮರಳಿಸಿದರು   

ನಿಡಗುಂದಿ: ತಮಗೆ ಸಿಕ್ಕಿದ್ದ 72 ಸಾವಿರ ಮೌಲ್ಯದ 10 ಗ್ರಾಂ ತೂಕದ ಚಿನ್ನದ ಉಂಗುರವನ್ನು ಸಂಬಂಧಿಸಿದವರಿಗೆ ಪುನಃ ಹಿಂತಿರುಗಿಸುವ ಮೂಲಕ ಇಲ್ಲಿನ ಪಶು ಚಿಕಿತ್ಸಾಲಯದ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

ತಾಲ್ಲೂಕಿನ ಅಂಗಡಗೇರಿ ಗ್ರಾಮದ ರೈತ ಮುಖಂಡ ಕಾಶಿರಾಯ ದೇಸಾಯಿ ಅವರು ತಮ್ಮ ಎಮ್ಮೆಯೊಂದಕ್ಕೆ ಅನಾರೋಗ್ಯ ಕಾಡಿದ ಕಾರಣ ಗೊಳಸಂಗಿಯ ಪಶು ಚಿಕಿತ್ಸಾಲಯಕ್ಕೆ ಚಿಕಿತ್ಸೆಗೆಂದು ಸೋಮವಾರ ಬೆಳಿಗ್ಗೆ ಕರೆದುಕೊಂಡು ಬಂದಿದ್ದರು. ಎಮ್ಮೆಗೆ ಚುಚ್ಚುಮದ್ದು ಹಾಕುವಾಗ ಕೈ ಬೆರಳಿನ ಚಿನ್ನದ ಉಂಗುರ ಜಾರಿ ಬಿದ್ದಿರುವುದು ಯಾರಿಗೂ ಗೊತ್ತಾಗಲಿಲ್ಲ.

ಚಿಕಿತ್ಸೆಯ ನಂತರ ಅಂಗಡಗೇರಿಗೆ ಬಂದಾಗ ಕೈ ಬೆರಳಲ್ಲಿದ್ದ ಉಂಗುರ ಕಳೆದಿರುವುದು ಗಮನಕ್ಕೆ ಬಂದಿತು. ಗಾಬರಿಯಿಂದ ಅತ್ತಿಂದಿತ್ತ ಹುಡುಕಾಟ ನಡೆಸಿದ ಬಳಿಕ ಕಾಶಿರಾಯ ದೇಸಾಯಿ ಅವರು ಗೊಳಸಂಗಿ ಪಶು ಚಿಕಿತ್ಸಾಲಯಕ್ಕೂ ಭೇಟಿ ನೀಡಿ ಹುಡುಕಾಡಿದರು.

ADVERTISEMENT

ಪಶು ವೈದ್ಯಕೀಯ ಪರೀಕ್ಷಕ (ವೆಟರ್ನರಿ ಇನ್‌ಸ್ಪೆಕ್ಟರ್) ಮಲ್ಲಿಕಾರ್ಜುನಗೌಡ ಬಿರಾದಾರ ಎಮ್ಮೆಗೆ ಚಿಕಿತ್ಸೆ ನೀಡುವಾಗ ಉಂಗುರು ಇಲ್ಲಿಯೇ ಜಾರಿ ಬಿದ್ದಿತು. ನೀವು ಹೋದ ನಂತರ ನನಗೆ ಸಿಕ್ಕಿತು ಎಂದು ತಿಳಿಸಿ, ಮರಳಿ ಹಿಂತಿರುಗಿಸಿದ್ದಾರೆ.

ಉಂಗುರು ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಕಾಶಿರಾಯ ದೇಸಾಯಿಯವರು ಮಲ್ಲಿಕಾರ್ಜುನಗೌಡ ಬಿರಾದಾರ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಪಶು ವೈದ್ಯಾಧಿಕಾರಿ ಡಾ.ಸರ್ಪರಾಜ್ ಇನಾಮದಾರ, ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.