ವಡಗೇರಾ: ಸರ್ಕಾರದ ಜನಪರ ಯೋಜನೆಗಳು ಹಾಗೂ ಸೌಲಭ್ಯಗಳು ಗ್ರಾಮಸ್ಥರಿಗೆ ತಲುಪಬೇಕಾದರೆ ಅಧಿಕಾರಿಗಳು ಸಾಕಷ್ಟು ಪ್ರಚಾರ ಕೈಗೊಳ್ಳಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ವಡಗೇರಾ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ತಾ.ಪಂ ವತಿಯಿಂದ ಆಯೋಜಿಸಿದ್ದ ಸಂಪೂರ್ಣತಾ ಅಭಿಯಾನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರವು ವಡಗೇರಾ ತಾಲ್ಲೂಕನ್ನು ’ಮಹತ್ವಾಕಾಂಕ್ಷಿ’ ತಾಲ್ಲೂಕು ಎಂದು ಘೋಷಣೆ ಮಾಡಿರುವುದರಿಂದ ಈ ಭಾಗದಲ್ಲಿ ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಜಲಸಂನ್ಮೂಲ, ಕೌಶಲ ಅಭಿವೃದ್ಧಿ, ಮೂಲಭೂತ ಸೌಕರ್ಯ, ಸಾಮಾಜಿಕ ಅಭಿವೃದ್ಧಿಗಾಗಿ ಒತ್ತು ಕೊಡಲಾಗುತ್ತಿದೆ ಎಂದು ತಿಳಿಸಿದರು.
ಕೊರೊನಾ ಸಮಯದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಯಾವುದೆ ಭಯವಿಲ್ಲದೆ ಮನೆ ಮನೆಗೆ ತೆರಳಿ ರೋಗಿಗಳ ಮಾಹಿತಿ ಪಡೆದು ಉಪಚರಿಸಿದ ಸೇವೆ ಶ್ಲಾಘನೀಯ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಇದ್ದಾರೆ. ಅವರನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಿದಾಗ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕೀರ್ತಿ ಗಳಿಸಬಹುದು ಎಂದರು/
ತಾ.ಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ಮಾತನಾಡಿ, ಕೇಂದ್ರ ಸರ್ಕಾರವು 2023ರಲ್ಲಿ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಿದೆ. ಇದರ ವ್ಯಾಪ್ತಿಯಲ್ಲಿ 500 ಬ್ಲಾಕ್ಗಳು, 329 ಜಿಲ್ಲೆಗಳು 5 ವಿಷಯಗಳು ಒಳಗೊಂಡಿವೆ ಎಂದರು.
ಎನ್ಐಟಿಎಸ್ನ ಜಿಲ್ಲಾ ಕಾರ್ಯಕ್ರಮ ನಿರ್ದೇಶಕ ಅಂಶು ಭಾರದ್ವಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲಾ ಮಕ್ಕಳಿಂದ, ನೃತ್ಯ, ನಾಟಕ, ಬಂಜಾರ ಸಮುದಾಯದ ಯುವತಿಯರಿಂದ ನೃತ್ಯ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ದೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತಾಲ್ಲೂಕು ವೈದ್ಯಾಧಿಕಾರಿ ರಮೇಶ ಗುತ್ತೆದಾರ, ಸಹಾಯಕ ಕೃಷಿ ನಿರ್ದೇಶಕ ಸುನೀಲ್ಕುಮಾರ, ಸಿಡಿಪಿಒ ಮಲ್ಲಣ್ಣ, ಬಿಆರ್ಸಿ ರಾಜಕುಮಾರ, ಎಇಇ ಸಿದ್ದಣ್ಣಗೌಡ, ಪಿಡಿಒ ಶರಣಗೌಡ ಬಿ, ಶಿಕ್ಷಕ ಸಾಬರಡ್ಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.