ಶಹಾಪುರ: ಸರ್ವ ಶಿಕ್ಷಣ ಯೋಜನೆ ಅಭಿಯಾನ ಅಡಿಯಲ್ಲಿ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ 180 ಶಿಕ್ಷಕರು ಕಳೆದ ನಾಲ್ಕು ತಿಂಗಳಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ. ದೈನಂದಿನ ಜೀವನ ನಡೆಸಲು ಸಂಕಷ್ಟ ಎದುರಿಸುತ್ತಿದ್ದಾರೆ.
ವಡಗೇರಾ ತಾಲ್ಲೂಕು ರಚನೆಯಾಗಿದ್ದರೂ ಇನ್ನೂ ಶಹಾಪುರ ತಾಲ್ಲೂಕಿನಿಂದ ಶಿಕ್ಷಣ ಇಲಾಖೆಯು ಪ್ರತ್ಯೇಕಗೊಂಡಿಲ್ಲ. ವಡಗೇರಾ ಹಾಗೂ ಶಹಾಪುರ ತಾಲ್ಲೂಕಿನ ಸರ್ವ ಶಿಕ್ಷಣ ಅಭಿಯಾನದ ಯೋಜನೆ ಅಡಿಯಲ್ಲಿರುವ ಶಿಕ್ಷಕರು ಪ್ರತಿ ತಿಂಗಳು ಶಹಾಪುರ ತಾಲ್ಲೂಕು ಪಂಚಾಯಿತಿ ಮೂಲಕ ವೇತನ ಪಡೆದುಕೊಳ್ಳುತ್ತಿದ್ದರು. ಆದರೆ ನಾಲ್ಕು ತಿಂಗಳ ಹಿಂದೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ವಡಗೇರಾ ತಾಲ್ಲೂಕು ಪಂಚಾಯಿತಿ ಇಲಾಖೆಯ ಕೋಡ್ಗೆ ಅನುದಾನ ವರ್ಗಾವಣೆ ಮಾಡಿದ್ದರಿಂದ ಸಂಬಳ ಇಲ್ಲದೆ ಪರದಾಡುವಂತಾಗಿದೆ. ತಾಂತ್ರಿಕ ಸಮಸ್ಯೆಯು ನಮಗೆ ತುಂಬಾ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಸಂಬಳ ವಂಚಿತ ಶಿಕ್ಷಕರು 'ಪ್ರಜಾವಾಣಿ' ಮುಂದೆ ಅಳಲು ತೋಡಿಕೊಂಡಿದ್ದಾರೆ.
ಜೀವನ ಸಾಗಿಸುವುದು ಸವಾಲಿನ ಕೆಲಸವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಸಾಲದ ಕಂತು, ಔಷಧಿ ಖರ್ಚು ಹೀಗೆ ದೈನಂದಿನ ಬದುಕು ಸಾಗಿಸುವುದು ದುಸ್ತರವಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಸಿಇಒ ಅವರು ತುರ್ತು ಕ್ರಮ ತೆಗೆದುಕೊಂಡು ಅನುದಾನ ಬಿಡುಗಡೆಗೊಳಿಸಬೇಕು ಎಂದು ಸಂಬಳ ವಂಚಿತ ಶಿಕ್ಷಕರು ಮನವಿ ಮಾಡಿದ್ದಾರೆ.
‘ಆಗಸ್ಟ್ ತಿಂಗಳಿಂದ 180 ಶಿಕ್ಷಕರಿಗೆ ಸಂಬಳ ಬಂದಿಲ್ಲ. ಸಂಘದ ವತಿಯಿಂದ ಧರಣಿ ನಡೆಸಲು ಮುಂದಾಗಿದ್ದೇವು. ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಜಿಪಂ ಸಿಒಇ ಭರವಸೆ ನೀಡಿದ ಹಿನ್ನಲೆಯಲ್ಲಿ ಧರಣಿ ಕೈಬಿಡಲಾಗಿದೆ’ ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜ ಯಾಳಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.