ADVERTISEMENT

ಕಸ್ತೂರಿ ಬಾ ಶಾಲೆ ₹20 ಲಕ್ಷ ಅವ್ಯವಹಾರ ಆರೋಪ

ಶಿಕ್ಷಕಿ ತಾಜು ಅಮಾನತುಗೊಳಿಸಿದ ಡಿಡಿಪಿಐ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 15:22 IST
Last Updated 28 ಜೂನ್ 2024, 15:22 IST

ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಎಲ್ಹೇರಿ ಗ್ರಾಮದ ಕಸ್ತೂರಿಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯ ಶಾಲೆಯಲ್ಲಿ 2017ರ ಏಪ್ರಿಲ್ ತಿಂಗಳಿಂದ 2018ರ ನವೆಂಬರ್ ವರೆಗೆ ಅವ್ಯವಹಾರ ನಡೆಸಿದ ಆರೋಪದಲ್ಲಿ ಅಂದಿನ ಮುಖ್ಯಶಿಕ್ಷಕಿ (ಪ್ರಸ್ತುತ ಅದೇ ಶಾಲೆಯ ಸಹ ಶಿಕ್ಷಕಿ) ತಾಜು ಅವರನ್ನು ಇಲಾಖಾ ವಿಚಾರಣೆಗೆ ಕಾಯ್ದಿರಿಸಿದ ಡಿಡಿಪಿಐ ಎಚ್.ಟಿ.ಮಂಜುನಾಥ ಅವರು ಮಂಗಳವಾರ (ಜೂ.26) ಅಮಾನತುಗೊಳಿಸಿದ್ದಾರೆ.

ಅಬ್ದುಲ್ ಹಕೀಮ್ ಎನ್ನುವವರ ಮಾಲಿಕತ್ವದ ಎಚ್.ಕೆ.ಡಿಸ್ಟಿಬ್ಯೂಟರ್ಸ್, ಜತೆಗೆ ಕಲಬುರಗಿಯ ಖುಷಿ ಟ್ರೇಡಿಂಗ್ ಲಿಂಕ್, ಶಿಲ್ಪಾ ಡಿಸ್ಟಿಬ್ಯೂಟರ್ಸ್, ಸೂಪರ ಕಿರಾಣಾ ಗಳಿಗೆ ಚೆಕ್ ನೀಡಲಾಗಿದೆ. ಶಾಲಾ ಅನುದಾನವನ್ನು ನಿಯಮಬಾಹಿರವಾಗಿ ಖರ್ಚು ಮಾಡಿದ್ದು ಕಂಡುಬಂದಿದೆ. ಜತೆಗೆ ಖರ್ಚಿಗೆ ಸಂಬಂಧಿಸಿದ ಎಸ್.ಡಿ.ಎಂ.ಸಿ ನಡಾವಳಿಯಿಲ್ಲ ಮತ್ತು ಯಾವುದೇ ರಸೀದಿಗಳಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು ₹20 ಲಕ್ಷದವರೆಗೆ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಶಾಲೆಯ ಮುಖ್ಯಶಿಕ್ಷಕಿ ತಾಜು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನೀಡಿದ ಶಿಫಾರಸ್ಸಿನಂತೆ ಡಿಡಿಪಿಐ ಎಚ್.ಟಿ.ಮಂಜುನಾಥ ಅವರು ಮಂಗಳವಾರ ಶಿಕ್ಷಕಿ ತಾಜು ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಿ ಆದೇಶಿಸಿದ್ದಾರೆ.

ADVERTISEMENT
ನಮ್ಮ ವೇದಿಕೆಯಿಂದ 9 ತಿಂಗಳ ಹಿಂದೆ ದೂರು ನೀಡಿದ್ದೆವು. ಸಂಬಂಧಿಸಿದ ಶಿಕ್ಷಕಿ ಈಗ ಅಮಾನತಾಗಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ಸರಿಯಾದ ತನಿಖೆಮಾಡಿ, ದುರ್ಬಳಕೆಯಾದ ಸಾರ್ವಜನಿಕರ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು
- ಶರಣಬಸಪ್ಪ ಎಲ್ಲೇರಿ, ಕರವೇ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.