ADVERTISEMENT

ಯಾದಗಿರಿ | ಪಂಚರ್‌ ಅಂಗಡಿಯ ಯುವಕನಿಗೆ ದರ್ಶನ್‌ ಅಭಿಮಾನಿ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 15:25 IST
Last Updated 16 ಜೂನ್ 2024, 15:25 IST
ದರ್ಶನ್‌
ದರ್ಶನ್‌   

ಯಾದಗಿರಿ: ಪಂಚರ್‌ ಅಂಗಡಿಯ ಯುವಕನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಎಂಬುವವರನ್ನು ಯಾದಗಿರಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಡಿಯೊ ವೈರಲ್ ಆಗುತ್ತಿದ್ದಂತೆ ಯಾದಗಿರಿ ನಗರ ಠಾಣೆಯ ಪೊಲೀಸರು ಅಲರ್ಟ್ ಆಗಿ ಆರೋಪಿಯನ್ನ ಠಾಣೆಗೆ ಕರೆಸಿದ್ದರು.

ಪ್ರಕರಣದ ಹಿನ್ನಲೆ:

ADVERTISEMENT

ಯಾದಗಿರಿಯ ಗಂಗಾನಗರದ ಪಂಚರ್ ಅಂಗಡಿ ಯುವಕ ಅಭಿ ಎಂಬಾತನಿಗೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕೊಲೆ ಬೆದರಿಕೆ ಹಾಕಿದ್ದ. ‘ಬಾಸ್ ಬಾಸ್ ಎಂದು ಯಾಕೆ ಬಕೆಟ್‌ ಹಿಡಿಯುತ್ತಿರಿ?. ತಾಯಿ-ತಂದೆಗೆ ಬಕೆಟ್ ಹಿಡಿಯಿರಿ..’ ಎಂದು ಅಭಿ ಇ‌ನ್ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದನು. ಹೀಗಾಗಿ ಅಭಿಗೆ ಕಾಲ್ ಮಾಡಿ ಜೀವಂತವಾಗಿ ಸುಡುವುದಾಗಿ ರಾಜು ಬೆದರಿಸಿದ್ದ. ನಿನ್ನ ಮನೆ ಹಾಗೂ ಅಂಗಡಿಗೆ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಕರೆ ಮಾಡಿ ಹೆದರಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಸ್ ಅಂದರೂ ಅಷ್ಟೇ, ಡಿ ಬಾಸ್ ಅಂದರೂ ಅಷ್ಟೇ. ಬಾಸ್ ಬಗ್ಗೆ ಮಾತಾಡಿದರೆ ಖಾಲಿಯಾಗ್ತಿದಿ ನೀನು, ಅಂಗಡಿ ಸಮೇತ ಬೆಂಕಿ ಹಚ್ತಾರೆ. ಕೂಡಲೇ ಕ್ಷಮೆ ಕೇಳಿ ವಿಡಿಯೊ ಮಾಡಿ ಹಾಕು. ಹಾಕಿರುವ ವಿಡಿಯೊ ಡಿಲೀಟ್ ಮಾಡು ಎಂದು ದರ್ಶನ್ ಅಭಿಮಾನಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಯುವಕ ಅಭಿಗೆ ಬೆದರಿಕೆ ಹಾಕಿದ್ದನು. ಹೀಗಾಗಿ ರಾಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

’ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜುನನ್ನು ಠಾಣೆಗೆ ಕಳುಹಿಸಿ ಎಚ್ಚರಿಕೆ ನೀಡಲಾಗಿದೆ. ಎಫ್‌ಐಆರ್‌ಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್‌ ಪ್ರಕ್ರಿಯೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಎಸ್‌ಐ ಮಂಜನಗೌಡ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.