ಸುರಪುರ: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಬೆಂಗಳೂರಿನ ಉಗ್ರಾಣ ಭವನದಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದರು. ಬೆಳಿಗ್ಗೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು, ಕಡತಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು.
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು. ನಿಗಮದ ವ್ಯವಸ್ಥಾಪಕರು, ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ರಾಜಾ ವೆಂಕಟಪ್ಪನಾಯಕ ಮಾತನಾಡಿ, ‘ರಾಜ್ಯಾದ್ಯಂತ ಇರುವ ಉಗ್ರಾಣ ಕೇಂದ್ರಗಳಲ್ಲಿ ಕೃಷಿ ಉತ್ಪನ್ನಗಳು, ಬೀಜಗಳು, ಗೊಬ್ಬರ ಮತ್ತು ಕೃಷಿ ಸಲಕರಣೆಗಳು, ಇತರೆ ಅಧಿಸೂಚಿತ ಸಾಮಗ್ರಿಗಳನ್ನು ವೈಜ್ಞಾನಿಕವಾಗಿ ದಾಸ್ತಾನು ಮಾಡಲು ಕ್ರಮ ವಹಿಸುತ್ತೇನೆ’ ಎಂದು ಹೇಳಿದರು.
‘ರೈತರು ಮತ್ತು ಇತರೆ ದಾಸ್ತಾನುದಾರರ ಸಂಗ್ರಣಾ ಬೇಡಿಕೆ ಆಧರಿಸಿ ವರ್ಷದಿಂದ ವರ್ಷಕ್ಕೆ ಗೋದಾಮುಗಳನ್ನು ನಿರ್ಮಾಣ ಮಾಡಲು ಶ್ರಮಿಸುತ್ತೇನೆ. ಉಗ್ರಾಣ ನಿಗಮದ ಆಡಳಿತವನ್ನು ಚುರುಕುಗೊಳಿಸಿ ಹೊಸ ಸ್ಪರ್ಶ ನೀಡುತ್ತೇನೆ. ನಮ್ಮ ಪಕ್ಷ ನನಗೆ ನೀಡಿದ ಈ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮ ದೇಶದಲ್ಲೆ ಮಾದರಿಯಾಗುವ ಹಾಗೆ ಕರ್ತವ್ಯ ನಿರ್ವಹಿಸುತ್ತೇನೆ’ ಎಂದರು.
ಸುರಪುರ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅನೇಕರು ಬೆಂಗಳೂರಿಗೆ ತೆರಳಿ ರಾಜಾ ವೆಂಕಟಪ್ಪನಾಯಕ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಸುರಪುರ ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ, ಮುಖಂಡರಾದ ರಾಜಾ ವೇಣುಗೋಪಾಲನಾಯಕ, ಶಾಂತಗೌಡ ಚನ್ನಪಟ್ಟಣ, ವಿಠ್ಠಲ ಯಾದವ, ರಾಜಾ ಕುಮಾರನಾಯಕ, ನಿಂಗರಾಜ ಬಾಚಿಮಟ್ಟಿ, ಚಂದ್ರಶೇಖರ ದಂಡಿನ, ಬಸನಗೌಡ ಪಾಟೀಲ ದೇವಾಪುರ, ಮಲ್ಲಣ್ಣ ಸಾಹುಕಾರ ಮುಧೋಳ, ಆರ್.ಎಂ. ರೇವಡಿ ಸಾಹುಕಾರ ಹುಣಸಗಿ, ರಾಜಾ ಸಂತೋಷನಾಯಕ, ರಾಜಾ ಸುಶಾಂತ್ ನಾಯಕ, ರಾಜಾ ಸುಭಾಶಚಂದ್ರ ನಾಯಕ, ರಾಜಾ ಕೃಷ್ಣದೇವರಾಯ ನಾಯಕ, ಗುಂಡಪ್ಪ ಸೊಲ್ಲಾಪುರ, ಸೂಗೂರೇಶ ವಾರದ, ಅಬ್ದುಲ್ ಗಫಾರ ನಗನೂರಿ, ವೆಂಕಟೇಶ ಹೊಸ್ಮನಿ, ನಾಸೀರ್ ಹುಸೇನ್ ಕುಂಡಾಲೆ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ನಾಗಪ್ಪ ಕನ್ನೆಳ್ಳಿ ದೇವರಗೋನಾಲ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.