ಕೆಂಭಾವಿ: ರಾತ್ರಿ ವೇಳೆ ಮುಖ್ಯ ರಸ್ತೆಗೆ ಅಡ್ಡಲಾಗಿ ನಿಂತು ವಾಹನ ಸವಾರರನ್ನು ಹೆದರಿಸಿ ದರೋಡೆ ನಡೆಸುತ್ತಿದ್ದ ಮೂವರನ್ನ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಹಲವು ತಿಂಗಳುಗಳಿಂದ ರಾತ್ರಿ ವೇಳೆ ಕೆಂಭಾವಿ-ನಗನೂರ ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ವಾಹನ ಸವಾರರನ್ನು ಹೆದರಿಸಿ ಅವರಲ್ಲಿದ್ದ ಮೊಬೈಲ್ ಮತ್ತು ನಗದನ್ನು ವಶಪಡಿಸಿಕೊಂಡು ಓಡಿ ಹೋಗುತ್ತಿದ್ದ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ ಸಚಿನ್ ಚಲುವಾದಿ,‘ಈಚೆಗೆ ನಗನೂರ ರಸ್ತೆಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ಅವರ ಬಳಿ ಇದ್ದ ಎರಡು ಮೊಬೈಲ್ ಮತ್ತು ನಗದು ದೋಚಿದ್ದ ಪ್ರಕರಣ ಮತ್ತು ಇನ್ನುಳಿದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸಿಂದಗಿ ತಾಲ್ಲೂಕಿನ ಅಂತರಗಂಗಿ ಗ್ರಾಮದ ರಾಜು ಮಾದರ (24), ಜೇವರ್ಗಿ ತಾಲ್ಲೂಕಿನ ವಡಗೇರಿ ಗ್ರಾಮದ ಸುನೀಲ ದೊಡಮನಿ (20), ಶಿವಕುಮಾರ ಮಾದರ (21) ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಶಹಾಪುರ ತಾಲ್ಲೂಕಿನ ಬಿದರಾಣಿ ಗ್ರಾಮದ ಸಿದ್ದು ಮಾದರ ಎಂಬ ಆರೋಪಿ ಪರಾರಿಯಾಗಿದ್ದಾನೆ. ಬಂಧನಕ್ಕೆ ಜಾಲ ಬೀಸಲಾಗಿದೆ. ಬಂಧಿತರಿಂದ 11,000 ನಗದು, ಮೊಬೈಲ್ ಫೋನ್, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ ಪಿಎಸ್ಐ ರಾಜಶೇಖರ ರಾಠೋಡ, ಅಪರಾಧ ವಿಭಾಗದ ಪಿಎಸ್ಐ ಮಾಣಿಕಪ್ಪ, ಎ.ಎಸ್.ಐ ಮೋನಪ್ಪ, ಬಸನಗೌಡ, ಬಾಬು ನಾಯ್ಕಲ್, ಸಿ.ಎಚ್.ಸಿ ಪರಮಾನಂದ, ಎಚ್.ಸಿ.ಗುಂಡಪ್ಪ, ಪ್ರಕಾಶ, ಬಸವರಾಜ, ಶಿವಪ್ಪ, ವಿಜಯಾನಂದ, ಸೈಯ್ಯದ್, ಸಿದ್ದಪ್ಪ, ಮಾಳಪ್ಪ ಭಾಗವಹಿಸಿದ್ದರು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.