ಕೆಂಭಾವಿ: ಸಮೀಪದ ಮಲ್ಲಾ ಗ್ರಾಮದ ಜೋಡೆತ್ತುಗಳು ಕೇವಲ ಏಳು ಗಂಟೆಗಳಲ್ಲಿ ಇಪ್ಪತ್ತು ಎಕರೆ ಹತ್ತಿ ಬಿತ್ತಿದ ಜಮೀನಿನಲ್ಲಿ ಗಳೆ ಹೊಡೆಯುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿವೆ.
ಮಲ್ಲಾ ಗ್ರಾಮದ ಚಂದಪ್ಪ ಪೂಜಾರಿ ಎಂಬ ರೈತನ ಎತ್ತುಗಳು ಮಂಗಳವಾರ ಸತತ ಏಳು ಗಂಟೆಗಳ ಕಾಲ ಜೋಡು ದಿಂಡಿನ ಮೂಲಕ ಬಿತ್ತಿದ ಹೊಲದಲ್ಲಿ ಕಳೆ ತೆಗೆಯಲು ಗಳೆ ಹೊಡೆಯುವ ಮೂಲಕ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿವೆ.
ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ನಿರಂತರವಾಗಿ ರೈತರಿಗೆ ಈ ಎತ್ತುಗಳು ಸಾಥ್ ನೀಡಿ, ಜಮೀನಿನ ಕಳೆ ತೆಗೆಯುವ ಮೂಲಕ ಸ್ವಚ್ಛಗೊಳಿಸಿವೆ. ಗ್ರಾಮದ ಅನೇಕ ರೈತರು ಈ ಜೋಡೆತ್ತಗಳ ಸಾಹಸ ವೀಕ್ಷಿಸಿ ಎತ್ತುಗಳಿಗೆ ಬೆನ್ನುತಟ್ಟಿ ಖುಷಿ ಪಟ್ಟರು. 7 ಗಂಟೆಗಳ ನಿರಂತರ ಉಳಿಮೆಯ ಕೆಲಸದಲ್ಲಿ ಎತ್ತುಗಳಿಗೆ ಸಿದ್ಧರಾಜ, ರೇವಣಸಿದ್ದ, ಸತೀಶ ಪೂಜಾರಿ, ದೇವೇಂದ್ರ ಮ್ಯಾಗೇರಿ ಸಾಥ್ ನೀಡಿದರು.
ರೈತನ ಜೊತೆಯಾಗಿ ಆಯಾಸವಿಲ್ಲದೆ ಕೆಲಸ ಮಾಡುತ್ತಿರುವ ಎತ್ತುಗಳ ಕಾರ್ಯ ಶ್ಲಾಘನೀಯ. ಪಶು ಇಲಾಖೆ ಇಂತಹ ಸಾಹಸಮಯ ಜಾನುವಾರುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹಿರಿಯ ರೈತ ಮುಖಂಡ ಮಹಿಪಾಲರೆಡ್ಡಿ ಡಿಗ್ಗಾವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.