ಶಹಾಪುರ: ನಗರದ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ಕಚೇರಿಯಿಂದ ನಕಲಿ ದಾಖಲೆ ಸೃಷ್ಟಿಸಿ ₹ 1.42 ಲಕ್ಷ ವಂಚನೆ ಮಾಡಿರುವ ಪ್ರಕರಣ ಹೊರಬಂದಿದೆ.
ಶಿರವಾಳ ಗ್ರಾಮದ ನಿವೃತ್ತ ಎಂಜಿನಿಯರ್ ಶಿವಣ್ಣಗೌಡ ಪಾಟೀಲ ಅವರು ಪುತ್ರ ಸಮೀತ್ ಹೆಸರಿನಲ್ಲಿ ಶಹಾಪುರ ಎಲ್ಐಸಿ ಏಜೆಂಟರ ಮುಖಾಂತರ ಜೀವನ ಕಿಶೋರ ಜೀವ ವಿಮೆ ಅಡಿಯಲ್ಲಿ ₹ 1 ಲಕ್ಷ ವಿಮಾ ಬಾಂಡ್ ಮಾಡಿಸಿದ್ದರು. ಅದರ ಮುಕ್ತಾಯದ ಅವಧಿ 2021 ಆಗಿತ್ತು. ಆದರೆ ಮಗ ಸಮೀತ್, 2017 ಫೆಬ್ರವರಿ 18ರಂದು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದ. ದುಃಖದಲ್ಲಿ ಪೋಷಕರು ಎಲ್ಐಸಿ ಕ್ಲೇಮ್ ಮಾಡಿಸಿಕೊಂಡಿಲ್ಲ.
ಆದರೆ ಅಕ್ಟೋಬರ್ 3ರಂದು ಶಹಾಪುರ ಎಲ್ಐಸಿ ಹಾಗೂ ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ಗೆ ಹೋಗಿದ್ದಾಗ ಅಪರಿಚಿತ ವ್ಯಕ್ತಿಯು, ಮೃತಪಟ್ಟಿರುವ ತಮ್ಮ ಮಗ ಸಮೀತ್ ಹೆಸರಿನಲ್ಲಿ ನಕಲಿ ಆಧಾರ್, ಪ್ಯಾನ್ ಕಾರ್ಡ್ ಸೃಷ್ಟಿಸಿ, ಖಾತೆ ಸಂಖ್ಯೆ 002003009019 ಗೆ 2024 ಮಾರ್ಚ್ 20ರಂದು ₹ 1.42 ಲಕ್ಷ ಜಮಾ ಮಾಡಿಸಿಕೊಂಡು, ಅದೇ ದಿನ ಹಣ ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂದು ಮೃತ ಸಮೀತ್ ಅವರ ತಂದೆ ಶಿವಣ್ಣಗೌಡ ಪಾಟೀಲ ಅವರು ಶನಿವಾರ ದೂರು ನೀಡಿದ್ದಾರೆ.
ಶಹಾಪುರ ಠಾಣೆ ಪಿಎಸ್ಐ ಸೋಮಲಿಂಗಪ್ಪ ದೂರು ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.