ಯಾದಗಿರಿ: ‘ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ರೋಗಗಳಿಂದ ದೂರ ಇರಲು ಶುದ್ಧ ಕುಡಿಯುವ ನೀರು, ಒಳ್ಳೆಯ ಗಾಳಿ, ಬೆಳಕು ಹಾಗೂ ಉತ್ತಮವಾದ ಆಹಾರ ಪದ್ಧತಿ, ಜೀವನ ಶೈಲಿ ಅವಶ್ಯ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹10 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಶುದ್ಧ ಘಟಕ ಉದ್ಘಾಟಿಸಿ ಮಾತನಾಡಿದರು.
ಯಾದಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಾಲಾ–ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಲು ಪ್ರಥಮ ಆದ್ಯತೆ ಕೊಡುತ್ತಿದ್ದೇನೆ. ಅದಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪ್ರಾಂಶುಪಾಲರು ಮನವಿ ಸಲ್ಲಿಸಿದ ಒಂದು ತಿಂಗಳಲ್ಲಿ ಅದನ್ನು ಮಂಜೂರು ಮಾಡಿ ನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಾಲೇಜಿನ ಆವರಣದಲ್ಲಿ ಹೈಮಾಸ್ಟ್ ದೀಪ, ಶೌಚಾಗೃಹ, ಕಾಲೇಜಿಗೆ ಬೇಕಾದ ಪೀಠೋಪಕರಣಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯ ಬಹಳ ಅಮೂಲ್ಯ. ಅದಕ್ಕಾಗಿ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದರೆ ನಿರಂತರವಾಗಿ ಅಧ್ಯಯನ ಮಾಡಬೇಕು. ಆಗ ಗುರಿ ಮುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಾರ್ಷಿಕ ಪರೀಕೆಯಲ್ಲಿ ಜಿಲ್ಲೆಯ ಫಲಿತಾಂಶ ಬಹಳ ಕೆಳಮಟ್ಟದಲ್ಲಿದೆ. ಫಲಿತಾಂಶವನ್ನು ಉನ್ನತೀಕರಿಸಲು ಉಪನ್ಯಾಸಕರು ಶ್ರಮಿಸಬೇಕು. ವರ್ಗ ಕೋಣೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಇಳಿದು ಉಪನ್ಯಾಸಕರು ವಿಷಯವನ್ನು ಬೋಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಡಿಡಿಪಿಯು ಚನ್ನಬಸ್ಸಪ್ಪ ಕುಳಗೇರಿ, ತಾ.ಪಂ. ಇಒ ಬಸವರಾಜ ಶರಬೈ, ಬಸವರಾಜ ಜುಗೇರಿ, ಪ್ರಾಂಶುಪಾಲ ರುದ್ರಗೌಡ ಮಾಲೀಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಸಿದ್ರಾಮಪ್ಪ ಅನವಾರ, ಮನೋಹರ, ಸ್ಯಾಮ್ಯುವೆಲ್ ಕೆನಡಿ, ಸೋಮಶೇಖರ ಚಾಗಟೆ, ಶ್ರೀನಿವಾಸ ಮೊಯಿಲಿ, ವಿಜಯಲಕ್ಷ್ಮೀ, ಅನಿತಾ, ಶಿವಲೀಲಾ, ಅನಿತಾ ಗುಂಟಿ, ಫನಿಜಾ ಫಾತೀಮಾ, ಯಲ್ಲಪ್ಪ, ನಿಂಗಪ್ಪ, ಶ್ರೀಕಾಂತ, ನಾಗಪ್ಪ ಮಡಿವಾಳ ಹಾಗೂ ಸನ್ನಿ ಜಾಫ್ರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.