ADVERTISEMENT

ಸಂಗವಾರ: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 15:36 IST
Last Updated 3 ಜೂನ್ 2024, 15:36 IST
ನಂಜುಂಡ ನಾಗಣ್ಣೋರ
ನಂಜುಂಡ ನಾಗಣ್ಣೋರ    

ಸೈದಾಪುರ: ಸಮೀಪದ ಸಂಗವಾರ ಗ್ರಾಮದ ಯುವರೈತ ಸಾಲಬಾಧೆಯಿಂದ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ನಂಜುಂಡ ಬಸವರಾಜ ನಾಗಣ್ಣೋರ (35) ಆತ್ಮಹತ್ಯೆ ಮಾಡಿಕೊಂಡ ರೈತ. ರೈತ ನಂಜುಂಡ 2.5 ಎಕರೆ ಜಮೀನು ಹೊಂದಿದ್ದ. ಕೃಷಿ ಚಟುವಟಿಕೆ ಮತ್ತು ಕುಟುಂಬ ನಿರ್ವಹಣೆಗೆ ಬ್ಯಾಂಕ್, ಸ್ನೇಹಿತರು ಹಾಗೂ‌ ಸಂಬಂಧಿಕರ ಹತ್ತಿರ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ. ಬೆಳೆ ಸರಿಯಾಗಿ ಬಾರದೆ ನಷ್ಟ ಅನುಭವಿಸಿದ್ದ.

‘ಪ್ರಸ್ತುತ ವರ್ಷ ಬಿತ್ತನೆಗಾಗಿ ಅವರಿವರ ಹತ್ತಿರ ಸಾಲ ಕೇಳಿದಾಗ ಯಾರೂ ಹಣ ನೀಡದಿದ್ದಾಗ ಮಾನಸಿಕವಾಗಿ ನೊಂದಿದ್ದರು. ಇದರಿಂದ ಭಾನುವಾರ ತಡರಾತ್ರಿ ನೇಣಿಗೆ ಶರಣಾಗಿದ್ದಾನೆ’ ಎಂದು ಮೃತ ರೈತನ ಹೆಂಡತಿ ತಾಯಮ್ಮ ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಘಟನಾ ಸ್ಥಳಕ್ಕೆ ಪಿಐ ಸುರೇಶ ಎಸ್. ತಳವಾರ, ಅಪರಾಧ ವಿಭಾಗದ ಪಿಎಸ್‌ಐ ಅಲ್ಲಾಭಕ್ಷಾ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಸೈದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ರೈತನ ಕುಟುಂಬಕ್ಕೆ ಧನ ಸಹಾಯ: ವಿಷಯ ತಿಳಿದ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಶರಣಿಕ ಕುಮಾರ್ ದೋಕಾ ರೈತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಮುಂದಿನ ಮಕ್ಕಳ ಭವಿಷಕ್ಕಾಗಿ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿ ಮತ್ತು ವೈಯಕ್ತಿಕವಾಗಿ ಧನ ಸಹಾಯ ನೀಡಿದರು.

ಸೈದಾಪುರ ಸಮೀಪದ ಸಂಗವಾರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಶರಣಿಕ ಕುಮಾರ್ ದೋಕಾ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಿಪಾಲ್ ರೆಡ್ಡಿ ದುಪ್ಪಲ್ಲಿ, ಯೂಥ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕಂದಳ್ಳಿ, ನರಸಪ್ಪ, ರಾಘು ,ಮಾಳಪ್ಪ , ಬಸವರಾಜ ಉಪಸ್ಥಿತರಿದ್ದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.