ಶಹಾಪುರ: ‘ತಾಲ್ಲೂಕಿನ ಗಂಗುನಾಯಕ ತಾಂಡಾಕ್ಕೆ ಈಗಾಗಲೇ ರಸ್ತೆ ಇದೆ. ಅದನ್ನು ದುರಸ್ತಿಗೊಳಿಸಲಾಗುವುದು. ಅಲ್ಲದೆ ತಾಂಡಾಕ್ಕೆ ತೆರಳುವ ಇನ್ನೊಂದು ಮಾರ್ಗವಿದೆ. ಅಲ್ಲಿ ರಸ್ತೆ ನಿರ್ಮಾಣಕ್ಕಾಗಿ ಹೊಸಕೇರಾ ಮೇಲಿನ ತಾಂಡಾದ ಮುಂಭಾಗದಲ್ಲಿ ಕಾಲುವೆ ಮೇಲೆ ಸೇತುವೆ ನಿರ್ಮಿಸುವ ಪ್ರಸ್ತಾವ ಸಲ್ಲಿಸಲಾಗಿದೆ. ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ವಿಳಂಬವಾಗುತ್ತಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
‘ಪ್ರಜಾವಾಣಿ’ ಜೊತೆ ಗುರುವಾರ ಮಾತನಾಡಿದ ಅವರು, ‘ಪ್ರಜಾವಾಣಿಯಲ್ಲಿ ಗುರುವಾರ ಪ್ರಕಟವಾದ ‘ತಾಂಡಾದಲ್ಲಿ ಅಕ್ಷರ ಕ್ರಾಂತಿ’ ವರದಿ ಓದಿದೆ. ತುಂಬಾ ಖುಷಿಯಾಯಿತು. ಇದು ನಮ್ಮ ಕ್ಷೇತ್ರಕ್ಕೆ ಮಾದರಿ ತಾಂಡಾ ಆಗಿದೆ. ನಾನು ಸಾಕಷ್ಟು ಸಲ ತಾಂಡಾಕ್ಕೆ ಭೇಟಿ ಕೊಟ್ಟಿರುವೆ. ಇನ್ನೂ ಹೆಚ್ಚಿನ ಅನುದಾನದ ಜತೆಗೆ ಗ್ರಂಥಾಲಯದ ವ್ಯವಸ್ಥೆ ಮಾಡುವೆ’ ಎಂದರು.
‘ತಾಂಡಾದ ಜಮೀನುಗಳು ಕಾಲುವೆ ಮೇಲ್ಭಾಗದಲ್ಲಿವೆ. ಇದರಿಂದ ಕಾಲುವೆ ನೀರು ವಂಚಿತವಾಗಿವೆ. ಗಂಗು ನಾಯಕ ತಾಂಡಾದ ಸುತ್ತಮುತ್ತಲು ರಾಮು ನಾಯಕ ತಾಂಡಾ, ಬಾಂಗ್ಲಾ ತಾಂಡಾ, ದಾಮುಲು ನಾಯಕ ತಾಂಡಾ ಹೀಗೆ 15ಕ್ಕೂ ಹೆಚ್ಚು ತಾಂಡಾ ಬರುತ್ತವೆ. ತಾಂಡಾಕ್ಕೆ ಬಸ್ಸಿನ ಸೌಲಭ್ಯ ಒದಗಿಸಿದರೆ ಹೆಣ್ಣುಮಕ್ಕಳು ಸಹ ಶಾಲೆಗೆ ಬರುತ್ತಾರೆ. ತ್ವರಿತವಾಗಿ ಬಸ್ ಸಂಚಾರ ಆರಂಭಿಸಲು ಸೂಚಿಸುವೆ’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.