ಯಾದಗಿರಿ: ‘ಪೊಲೀಸರು ಎಂದರೆ ಶಿಸ್ತು, ಸಂಯಮ ಹಾಗೂ ಕಾನೂನು ಪಾಲನೆ ಮತ್ತು ಅನುಷ್ಠಾನ ಮಾಡುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲಿದೆ. ಆದರೆ, ಜಿಲ್ಲೆಯಲ್ಲಿ ಪೊಲೀಸ್ ಆಡಳಿತ ವ್ಯವಸ್ಥೆ ತುಕ್ಕು ಹಿಡಿದಿದೆ. ಸಾಣೆ ಹಿಡಿಯುವ ಕೆಲಸವಾಗಬೇಕಾಗಿದೆ’ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಲಿದೆ.
ಈಚೆಗೆ ಗುರುಮಠಕಲ್ ಪಟ್ಟಣದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಲ್ಲಿನ ಶಾಸಕ ಶರಣಗೌಡ ಕಂದಕೂರ ಅವರು ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ಅಸಮಾಧಾನದ ಜತೆಗೆ ರಾಜೀನಾಮೆಯ ಮಾತನಾಡಿದ್ದರು. ಜತೆಗೆ ಯಾದಗಿರಿಯಲ್ಲಿ ಮರಳು ಮಾಫಿಯಾಕ್ಕೆ ಸಂಬಂಧಿಸಿದ ಶಾಸಕರ ಕುಟುಂಬದ ವಿರುದ್ಧವೂ ಮಾತುಗಳು ಕೇಳಿಬಂದವು. ಒಟ್ಟಾರೆ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಮಾತುಗಳು ಕೇಳಿಬರುತ್ತಿವೆ.
ಗುರುಮಠಕಲ್ ಸೇರಿದಂತೆ ಯಾದಗಿರಿ ಜಿಲ್ಲೆಯಲ್ಲಿ ಮರಳು ಅಕ್ರಮ ಗಾಡಿಗಳಿಗೆ ಹಿಡಿತವಿಲ್ಲ. ಮಟ್ಕಾ ಮತ್ತು ಗಾಂಜಾ ಮಾರಾಟವೂ ವ್ಯಾಪಕವಾಗಿದೆ. ‘ಜೂಜಾಟವನ್ನೂ ಪೊಲೀಸ್ ಇಲಾಖೆ ನಿಯಂತ್ರಿಸಲಾಗುತ್ತಿಲ್ಲ’ ಎನ್ನುವ ಆರೋಪವನ್ನು ಜುಲೈ 4 ರಂದು ಜರುಗಿದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರು ಗಮನಕ್ಕೆ ತಂದಿದ್ದರು.
ಅದಕ್ಕೆ ಗುರುಮಠಕಲ್ ಶಾಸಕರೂ ಕೂಡ ವೇದಿಕೆಯ ಮೇಲೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರ ಎದುರುಗಡೆ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಾ ‘ಎಲ್ಲೇರಿಯಿಂದ ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ಮರಳು ಅಕ್ರಮ ಸಾಗಾಟದ ಕುರಿತು ಬರುವ ದೂರುಗಳನ್ನು ನಾನು ಹಲವುಬಾರಿ ತಿಳಿಸಿದರೂ ಕ್ರಮವಾಗಿಲ್ಲ. ನನ್ನ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಮ್ಮ ಇಲಾಖೆ ಕ್ರಮವಹಿಸದಾಗಿದೆ’ ಎನ್ನುವ ಅರ್ಥದ ಮಾತುಗಳನ್ನಾಡಿದ್ದರು.
‘ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮರಳುಗಾರಿಕೆ ಅಕ್ರಮ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳ ವಿರುದ್ಧ ಸಂಘಟನೆಗಳ ನಾಯಕರು, ಸಾಮಾಜಿಕ ಕಾರ್ಯಕರ್ತರು ಧ್ವನಿಯೆತ್ತಿದ್ದಾರೆ. ಕೂಡಲೇ ಮರಳು ಅಕ್ರಮ ಸಾಗಾಟ ನಿಲ್ಲಿಸಬೇಕು. ಇದರಲ್ಲಿ ದೊಡ್ಡವರು ಶಾಮೀಲಾಗಿದ್ದಾರೆ ಎಂದು ದೂರುಗಳೂ ಸುತ್ತಿತ್ತಿವೆ. ಇಷ್ಟಾದರೂ ಸಂಬಂಧಿತ ಅಧಿಕಾರಿಗಳು ಏನೇನು ಕ್ರಮ ವಹಿಸಿದ್ದಾರೆ ಎನ್ನುವುದು ಮಾತ್ರ ಜನತೆಗೆ ಹೇಳುತ್ತಿಲ್ಲವಲ್ಲ’ ಎಂದು ಹಿರಿಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘ಶಹಾಪುರ ಠಾಣೆಯು ಹಸಿರು ಹುಲ್ಲಿನಂತೆ ಆಗಿದೆ. ರಾಜಕೀಯ ಪ್ರಭಾವ ಬಳಸಿಕೊಂಡು ಬರುವ ಇಲ್ಲಿನ ಅಧಿಕಾರಿಗಳು ಮುಖಂಡರ ಮರ್ಜಿಯಲ್ಲಿಯೇ ಕೆಲಸ ನಿರ್ವಹಿಸಬೇಕು. ಕೃಷ್ಣಾ ನದಿಯಿಂದ ಮರಳು ಸಾಗಣೆಯ ಮಾಫಿಯಾ ಇವರಿಗೆ ಹೆಚ್ಚು ಆದಾಯ ತರುವ ವಾಮ ಮಾರ್ಗವಾಗಿದೆ. ಸ್ವತಃ ಕೆಲ ಪೊಲೀಸರು ಸ್ವಂತ ಟಿಪ್ಪರ್ ಇಟ್ಟು ಮರಳು ಅಕ್ರಮವಾಗಿ ಸಾಗಣೆ ಮಾಡುವುದು ಗುಟ್ಟಾಗಿ ಉಳಿದಿಲ್ಲ. ತಾಲ್ಲೂಕಿನಲ್ಲಿ ಒಂದೊಂದು ಠಾಣೆ ಒಬ್ಬ ಪ್ರಭಾವಿ ವ್ಯಕ್ತಿಯ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗತ್ತಲಿವೆ’ ಎನ್ನುತ್ತಾರೆ ಬಿಜೆಪಿಯ ಹಿರಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.
ಗುರುಮಠಕಲ್ ತಾಲ್ಲೂಕಿನಲ್ಲಿ ಎಲ್ಲೇರಿ ಮೂಲಕ ಮರಳು ಸಾಗಾಟ ನಡೆಸಲಾಗುತ್ತಿತ್ತು. ಈಗ ಶಾಸಕರು ಗರಂ ಆದ ನಂತರ ಸದ್ಯ ಕೊಂಕಲ್ ಮಾರ್ಗದಲ್ಲಿ ಸಾಗಾಟವಾಗುತ್ತಿದೆ. ತಾಲ್ಲೂಕಿನ ವಿವಿಧ ರಸ್ತೆಗಳಲ್ಲಿ ರಾತ್ರಿ ವೇಳೆ ಮರಳು ಹೊತ್ತ ಟ್ರ್ಯಾಕ್ಟರ್ಗಳ ಸಾಲು ಮೆರವಣಿಗೆಯಂತೆ ಸಾಗುತ್ತಿವೆ. ಜತೆಗೆ ಅತಿ ವೇಗದಲ್ಲಿ ಟ್ರ್ಯಾಕ್ಟರ್ ಚಲಾಯಿಸುವುದರಿಂದ ರಾತ್ರಿ ಸಮಯ ವಾಹನಗಳು ಚಲಾಯಿಸಲೂ ಭಯವಾಗುತ್ತಿದೆ ಎನ್ನುವುದು ವಾಹನ ಸವಾರರ ಗೋಳು.
‘ಆಯಾ ಠಾಣೆಯ ವ್ಯಾಪ್ತಿಯ ಅಧಿಕಾರಿ ನೊಂದ ಜನತೆ ಠಾಣೆಗೆ ತೆರಳಿ ದೂರು ನೀಡಲು ಮುಂದಾದರೆ ಸೌಜನ್ಯವಾಗಿ ವರ್ತಿಸದ ಅಧಿಕಾರಿ ವಿರುದ್ಧ ಮೇಲಧಿಕಾರಿ ಡಿವೈಎಸ್ಪಿ ಹಾಗೂ ಎಸ್ಪಿ ಅವರಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದರೆ ಕನಿಷ್ಠ ಸೌಜನ್ಯದಿಂದ ವರ್ತಿಸುವುದಿಲ್ಲ. ಸಮಸ್ಯೆಯನ್ನು ಆಲಿಸುವುದಿಲ್ಲ. ಮತ್ತೆ ಯಾರ ಮುಂದೆ ಗೋಳು ಹೇಳಬೇಕು’ ಎಂಬ ಪ್ರಶ್ನೆ ಜನತೆಯದ್ದಾಗಿದೆ.
ಜಿಲ್ಲೆಯಲ್ಲಿ ಪೊಲೀಸ್ ಆಡಳಿತ ಹದಗೆಟ್ಟಿದೆ. ಇದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಯಾವುದೇ ವ್ಯಕ್ತಿ ತನಗೆ ಆದ ಅನ್ಯಾಯ ಹಾಗೂ ನೊಂದ ವ್ಯಕ್ತಿ ಠಾಣೆಗೆ ತೆರಳಿದರೆ ಮುಕ್ತವಾಗಿ ದೂರು ನೀಡುವ ವಾತಾವರಣ ನಿರ್ಮಿಸಬೇಕು. ಆಯಾ ತಾಲ್ಲೂಕಿನ ಠಾಣೆಯ ವ್ಯಾಪ್ತಿಯ ಗ್ರಾಮದ ನಿವಾಸಿಗಳೂ ಆಗಿರುವ ಪೊಲೀಸರನ್ನು ನೆರೆ ತಾಲ್ಲೂಕಿಗೆ ವರ್ಗಾವಣೆ ಮಾಡಿ ಎಂಬ ಸಲಹೆ ಸಾರ್ವಜನಿಕರದ್ದಾಗಿದೆ.
ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್
ಗುರುಮಠಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಮರಳು ಅಕ್ರಮ ಗಾಂಜಾ ಮಾರಾಟ ಮಟ್ಕಾ ಬುಕಿಂಗ್ ಇಸ್ಪೀಟ್ನಂತ ಅಕ್ರಮ ಚಟುವಟಿಕೆಗಳು ಮಿತಿ ಮೀರಿವೆ. ಅಧಿಕಾರಿಗಳಿಗೆ ಗೊತ್ತಿದ್ದೂ ಸುಮ್ಮನಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ- ಶರಣಬಸಪ್ಪ ಎಲ್ಹೇರಿ ಕರವೇ ಅಧ್ಯಕ್ಷ
ಗಾಂಜಾ ಸೇವಿಸಿದ ಮಕ್ಕಳು ಈಚೆಗೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿಲ್ಲ. ತಂದೆ ತಾಯಿಗಳ ಗೋಳು ಹೇಳತೀರಾಗಿದೆ. ಕಾನೂನು ಅರಿವು ಮೂಡಿಸಿ ದಂಡ ವಿಧಿಸಿ. ಸರ್ಕಾರದ ಬೊಕ್ಕಸಕ್ಕೆ ಹಾನಿ ತಡೆಗಟ್ಟಿಸಂಜು ಅಳೆಗಾರ ಸಾಮಾಜಿಕ ಕಾರ್ಯಕರ್ತ
ಜಿಲ್ಲೆಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವವರು ಇಲ್ಲದಂತೆ ಆಗಿದೆ. ಇದೇ ರೀತಿ ಮುಂದುವರಿದರೆ ಪೊಲೀಸ್ ಸ್ಟೇಷನ್ ಮುತ್ತಿಗೆ ಹಾಕುತ್ತೇವೆನಾಗೇಶ ಗದ್ದಿಗೆ ಸಾಮಾಜಿಕ ಕಾರ್ಯಕರ್ತ
ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ದಂಧೆಗಳು ನಡೆಯುತ್ತಿವೆ. ಮರಳು ಅಕ್ರಮ ಸಾಗಾಟದ ಬಗ್ಗೆ ಮಟ್ಕಾ ಜೂಜಾಟದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಅಕ್ರಮ ಚಟುವಟಿಕೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆಮಲ್ಲು ಪೊಲೀಸ್ ಪಾಟೀಲ ವಡಗೇರಾ
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಬಂದಂತೆಲ್ಲಾ ದಾಳಿ ಮಾಡಿ ಕ್ರಮ ವಹಿಸಲಾಗುತ್ತಿದೆ. ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆಜಿ.ಸಂಗೀತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.