ADVERTISEMENT

ಗಲಭೆಗೆ ಪ‍್ರಚೋದನೆ: ಪ್ರತಾಪ್‌ ಸಿಂಹ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:19 IST
Last Updated 24 ಸೆಪ್ಟೆಂಬರ್ 2024, 14:19 IST

ಯಾದಗಿರಿ: ಧಾರ್ಮಿಕ ಭಾವನೆಗಳಿಗೆ ಅಘಾತವನ್ನುಂಟು ಮಾಡುವ ಉದ್ದೇಶದಿಂದ ದ್ವೇಷ ಮತ್ತು ಗಲಭೆಗೆ ಪ್ರಚೋದನೆ ನೀಡುವ ಭಾಷಣ ಮಾಡಿದ ಆರೋಪದಡಿ ಮೈಸೂರು–ಕೊಡಗು ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿ ಐವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 21ರಂದು ಶಹಾಪುರ ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಮೆರವಣಿಗೆ ವೇಳೆ ಪ್ರತಾಪ್ ಸಿಂಹ ಅವರು ಗಲಭೆಗೆ ಪ್ರಚೋದನೆ ನೀಡುವ ಮಾತುಗಳನ್ನು ಆಡಿದ್ದಾರೆ. ಅಲ್ಲದೆ ಹಿಂದೂ–ಮುಸ್ಲಿಂ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಗಲಭೆಗೆ ಪ್ರಚೋದಿಸುವುದು ವಿಡಿಯೊದಲ್ಲಿ ಕಂಡು ಬಂದಿದ್ದರಿಂದ ಕಲಂ 299, 192, ಬಿಎನ್‌ಎಸ್–2023ರ ಅಡಿಯಲ್ಲಿ ಪಿಎಸ್ಐ ಶಾಮಸುಂದರ್ ಪ್ರಕರಣ ದಾಖಲಿಸಿದ್ದಾರೆ.

ಕಾರ್ಯಕ್ರಮದ ಆಯೋಜಕರಾದ ಕರಣ್‌ ಚಂದ್ರಶೇಖರ್ ಸುಬೇದಾರ್, ಶಿವಕುಮಾರ್ ಭೀಮರಾಯ ಶಿರವಾಳ, ಗುರುರಾಜ್ ಈರಣ್ಣ ಕಾಮಾ, ನಾಗಭೂಷಣ ತಿಪ್ಪಣ್ಣ ಕುಂಬಾರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ADVERTISEMENT

‘ಹಿಂದೂಗಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮುಸ್ಲಿಮರು ಯಾವ ರೀತಿ ಪೆಟ್ರೋಲ್ ಬಾಂಬ್, ತಲವಾರ್‌ ತೋರಿಸುತ್ತಾರೋ, ಕಲ್ಲು ತೂರಾಟ ಮಾಡುತ್ತಾರೋ ಅದೇ ರೀತಿ ನೀವು ಕೂಡ ಸನ್ನದ್ಧರಾಗಿ ಮೆರವಣಿಗೆಗೆ ಹೋಗಿ’ ಎಂದು ಪ್ರತಾಪ್‌ ಸಿಂಹ ಭಾಷಣ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.